ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಈ ಬಾರಿ ಶತಾಯ ಗತಾಯ ಸೋಲಿಸಲೇ ಬೇಕು ಅಂತ ಬಿಜೆಪಿ ಪಣತೊಟ್ಟಿದೆ. ಅದಕ್ಕಾಗಿಯೇ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಸಚಿವರೂ ಅಷ್ಟೇ ಅಲ್ಲ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರೂ ಆಗಿರುವ ಆರ್ ಅಶೋಕ್ ಅವರನ್ನು ಡಿಕೆಶಿ ವಿರುದ್ಧ ಕಣಕ್ಕಿಳಿಸಲಾಗಿದೆ. ಡಿಕೆ ಶಿವಕುಮಾರ್ ಪ್ರತಿನಿಧಿಸುವ ಕನಕಪುರದಿಂದ ಆರ್ ಅಶೋಕ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಆರ್ ಅಶೋಕ್ ತಮ್ಮ ಸ್ವಕ್ಷೇತ್ರ ಪದ್ಮನಾಭನಗರದ ಜೊತೆಗೆ ಕನಕಪುರದಿಂದಲೂ ಸ್ಪರ್ಧಿಸಲಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಕನಕಪುರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಎದುರು ಕಂದಾಯ ಸಚಿವ ಆರ್. ಅಶೋಕ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.
ಸತತವಾಗಿ 7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿ. ಕೆ. ಶಿವಕುಮಾರ್ ಕನಕಪುರವನ್ನು ಕಾಂಗ್ರೆಸ್’ನ ಭದ್ರಕೋಟೆಯಾಗಿ ಮಾಡಿಕೊಂಡಿದ್ದಾರೆ. ಅಲ್ಲದೇ ರಾಮನಗರ ಜಿಲ್ಲೆಯಲ್ಲಿ ಡಿಕೆಶಿ ಸಹೋದರರ ಪ್ರಭಾವವೂ ಅಧಿಕವಾಗಿದೆ. ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದ್ದರಿಂದ ಅವರನ್ನು ಸೋಲಿಸಲು ಬಿಜೆಪಿ ತಂತ್ರ ರೂಪಿಸಿದೆ.
ಸಾತನೂರು ಕ್ಷೇತ್ರದಿಂದ ಡಿ. ಕೆ. ಶಿವಕುಮಾರ್ 2008ರಲ್ಲಿ ಕನಕಪುರಕ್ಕೆ ಬಂದರು. ಬಳಿಕ ನಡೆದ 3 ಚುನಾವಣೆಯಲ್ಲಿಯೂ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಅವರ ಗೆಲುವಿನ ಅಂತರ ಹೆಚ್ಚುತ್ತಲೇ ಇದೆ. 2008ರಲ್ಲಿ 7,179 ಮತಗಳ ಅಂತರದಿಂದ ಗೆದ್ದಿದ್ದ ಡಿ. ಕೆ. ಶಿವಕುಮಾರ್ 2018ರಲ್ಲಿ 79,909 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಈ ಬಾರಿಯ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಅದಕ್ಕಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಿ. ಸೋಮಣ್ಣ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕರನ್ನು ಕಣಕ್ಕಿಳಿಸಿದೆ. ಆ ಮೂಲಕ ಕಾಂಗ್ರೆಸ್ನ ಇಬ್ಬರು ಪ್ರಭಾವಿ ನಾಯಕರಿಗೆ ಸೋಲಿನ ರುಚಿ ತೋರಿಸಲು ತಂತ್ರ ರೂಪಿಸಿದೆ.