ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಟ ನೆಡುಮುಡಿ ವೇಣು (73) ಸೋಮವಾರ ನಿಧನರಾಗಿದ್ದಾರೆ. ವೇಣು ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟ. ಇವರು ನಾಟಕ ಮತ್ತು 500 ಕ್ಕೂ ಹೆಚ್ಚುಸಿನಿಮಾಗಳಲ್ಲಿ ನಟಿಸಿದ್ದಾರೆ.
ನಾಯಕ, ಖಳನಾಯಕ ಮತ್ತು ಪಾತ್ರ ನಟನಾಗಿ ತೆರೆಯಲ್ಲಿ ಮಿಂಚಿದ್ದ ವೇಣು, ಗಂಭೀರ ಮತ್ತು ತಮಾಷೆಯ ಪಾತ್ರಗಳಲ್ಲಿ ಸೈ ಎನಿಸಿಕೊಂಡವರು. ತಮ್ಮ ವಿಶಿಷ್ಟ ನಟನಾ ಶೈಲಿ ಮತ್ತು ಪ್ರತಿಭೆಯಿಂದ ವೇಣು ಭಾರತೀಯ ಚಿತ್ರರಂಗದ ನಂಬರ್ ಒನ್ ನಟರಲ್ಲಿ ಒಬ್ಬರಾಗಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಆರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾಗಿರುವ ವೇಣು ಕೂಡ ಚಿತ್ರಕಥೆಗಳನ್ನೂ ಬರೆದಿದ್ದಾರೆ.
ವೇಣು ಮೇ 22, 1948 ರಂದು ಆಲಪ್ಪುಳ ಜಿಲ್ಲೆಯ ನೆಡುಮುಡಿಯಲ್ಲಿ ಶಿಕ್ಷಕರಾಗಿದ್ದ ಪಿ ಕೆ ಕೇಶವನ್ ಪಿಳ್ಳೈ ಮತ್ತು ಕುಂಜಿಕುಟ್ಟಿಯಮ್ಮ ದಂಪತಿಯ ಮಗನಾಗಿ ಜನಿಸಿದರು. ಕೆ. ವೇಣುಗೋಪಾಲ್ ಇವರ ಪೂರ್ಣ ಹೆಸರು. ನೆಡುಮುಡಿ ಎನ್ ಎಸ್ ಎಸ್ ಹೈಯರ್ ಸೆಕೆಂಡರಿ ಶಾಲೆ, ಚಂಬಕ್ಕುಳಂ ಸೇಂಟ್ ಮೇರಿಸ್ ಹೈಯರ್ ಸೆಕೆಂಡರಿ ಶಾಲೆ ಮತ್ತು ಆಲಪ್ಪುಳ ಎಸ್ ಡಿ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಮತ್ತು ಕಲಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಕೆಲವು ವರ್ಷಗಳ ಕಾಲ ಸಮಾನಾಂತರ ಕಾಲೇಜು ಶಿಕ್ಷಕರಾಗಿ ಕೆಲಸ ಮಾಡಿದ್ದರು. ಕಾಲೇಜಿನ ಸಹಪಾಠಿಯಾಗಿದ್ದ ಖ್ಯಾತ ನಿರ್ದೇಶಕ ಫಾಸಿಲ್ ಜೊತೆ ಮಿಮಿಕ್ರಿ ಮತ್ತು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಕಲಾ ಜಗತ್ತಿಗೆ ಪ್ರವೇಶಿಸಿದ್ದರು.ಚಾಮರಂ, ಒರಿಡತ್ತೊರು ಫೈಲ್ಮ್ಯಾನ್, ಕಳ್ಳ ಪಲಿತ್ರನ್, ವಿಡ ಪರಯುಂ ಮುಂಬೇ, ಯವನಿಕಾ, ಎನಿಕ್ಕು ವಿಷಕುನ್ನು,ಅಚ್ಚುವೇಟ್ಟನ್ಡೆ ವೀಡ್, ಅಪ್ಪುಣ್ಮಿ, ಗುರೂಜಿ ಒರು ವಾಕ್, ಪಂಚವಡಿಪ್ಪಾಲಂ, ಹಿಸ್ ಹೈನೆಸ್ ಅಬ್ದುಲ್ಲಾ, ಭರತಂ, ಸೈರಾ ಮೊದಲಾದ ಸಿನಿಮಾಗಳಲ್ಲಿ ವೇಣು ನಟಿಸಿದ್ದಾರೆ. ಇಂಡಿಯನ್, ಅನ್ಯನ್ ತಮಿಳು ಸಿನಿಮಾಗಳಲ್ಲಿಯೂ ಇವರು ನಟಿಸಿದ್ದಾರೆ. ಕಾಟ್ಟತ್ತೆ ಕಿಳಿಕ್ಕೂಡ್ , ಒರು ಕಥ ಒಂದು ನುಣಕ್ಕಥ, ಸವಿದಂ, ತೀರ್ಥಂ ಮತ್ತು ಅಂಬಡ ಞಾನೇ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿದ್ದು ಪೂರಂ ಚಿತ್ರವನ್ನು ನಿರ್ದೇಶಿಸಿದ್ದಾರೆ.ಮೃತರು ಪತ್ನಿ, ಟಿ.ಆರ್. ಸುಶೀಲ ಮಕ್ಕಳು ಉಣ್ಣಿ ಗೋಪಾಲ್ ಮತ್ತು ಕಣ್ಣನ್ ಗೋಪಾಲ್ ರನ್ನು ಅಗಲಿದ್ದಾರೆ.https://twitter.com/PrithviOfficial/status/1447475385973686275?