dtvkannada

ಬೆಂಗಳೂರು: ಬೈಕ್ ಮತ್ತು ಟಿಪ್ಪರ್ ಲಾರಿ ಡಿಕ್ಕಿ ಸಂಭವಿಸಿ ಗಂಡನ ಕಣ್ಣೆದುರೇ ಹೆಂಡತಿ-ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಹೊರವರ್ತುಲ ರಸ್ತೆ ಬಳಿ ನಡೆದಿದೆ. ರಾಯಲ್ ಎನ್‌ಫೀಲ್ಡ್ ಬೈಕ್​ಗೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮೃತಪಟ್ಟವರನ್ನು ಶ್ರೀದೇವಿ ಮತ್ತು ಒಂದು ವರ್ಷದ ಗಂಡು ಮಗು ದೀಕ್ಷಿತ್ ಎಂದು ಗುರುತಿಸಲಾಗಿದೆ. ಬೈಕ್ ಸವಾರ ಶಿವಕುಮಾರ್ ಗೆ ಗಂಭೀರ ಗಾಯಗಳಾಗಿವೆ.ಕೆ.ಆರ್‌‌.ಪುರ‌ ದಿಂದ ಧರ್ಮಪುರಿಗೆ ಕುಟುಂಬದ ಜೊತೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಮಾರತ್​ ಹಳ್ಳಿ ಹೊರವರ್ತುಲ ರಸ್ತೆ ಬಳಿ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿ ಸವಾರರಾಗಿದ್ದ ಪತ್ನಿ ಶ್ರೀದೇವಿ ಹಾಗೂ ಒಂದು ವರ್ಷದ ಗಂಡು ಮಗು ದೀಕ್ಷಿತ್ ರಸ್ತೆ ಬಲಭಾಗದಲ್ಲಿ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಮೇಲೆ ಲಾರಿ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ಬಳಿಕ ಟಿಪ್ಪರ್​ ಚಾಲಕ ಎಸ್ಕೇಪ್ ಆಗಿದ್ದಾನೆ.ಶಿವಕುಮಾರ್​ ತೀವ್ರವಾಗಿ ಗಾಯಗೊಂಡಿದ್ದು, ಘಟನೆಯಲ್ಲಿ ಅವರ ಮೊಬೈಲ್​ ಸಹ ಕಳ್ಳತನವಾಗಿದೆ. ಶಿವಕುಮಾರ್ ಮೂಲತಃ ತಮಿಳುನಾಡಿನ ಧರ್ಮಪುರಿ ಮೂಲದವರಾಗಿದ್ದಾರೆ‌.‌ಟಿಪ್ಪರ್ ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡು ಬೈಕ್​ಗೆ ಗುದ್ದಿದ್ದಾನೆ ಎನ್ನಲಾಗಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಶಿವಕುಮಾರ್​ ಅವರ ಪತ್ನಿ ಮತ್ತು ಮಗುವಿನ ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.ಘಟನೆಗ ಕಾರಣರಾದ ಟಿಪ್ಪರ್ ಚಾಲಕ ನಾಪತ್ತೆಯಾಗಿದ್ದು, ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶಾಂತರಾಜು ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!