ಕಡಬ: ವಾರಗಳ ಹಿಂದೆ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧಿತರಾಗಿದ್ದ 7 ಮಂದಿ ಆರೋಪಿಗಳಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದ ಬಗ್ಗೆ ವರದಿಯಾಗಿದೆ.

ಕೆಲ ವಾರಗಳ ಹಿಂದೆ ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಕಾಡಾನೆಯೊಂದು ಅಮಾಯಕರಿಬ್ಬರನ್ನು ಬಲಿ
ಪಡೆದುಕೊಂಡಿದ್ದು ಇದರ ಸಲುವಾಗಿ ಅರಣ್ಯ ಇಲಾಖೆಯವರು ಆನೆ ಸೆರೆಹಿಡಿಯುತ್ತಿದ್ದ ವೇಳೆ ಪೊಲೀಸರು, ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮುಖಿ ನಡೆದು ಇಲಾಖಾ ವಾಹನಗಳಿಗೆ ಕಲ್ಲು ತೂರಾಟ ಮಾಡಿ ಹಾನಿ ಉಂಟು ಮಾಡಿ ಅಧಿಕಾರಿಗಳ ಕೊಲೆಗೆ ಯತ್ನಿಸಿದ್ದರು ಎಂದು ಪ್ರಕರಣ ದಾಖಲಿಸಿ 7 ಆರೋಪಿಗಳನ್ನು ಬಂಧಿಸಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಆರೋಪಿಗಳಾದ ಉಮೇಶ್ ಕಮರ್ಕಜೆ, ರಾಜೇಶ್ ಕಮರ್ಕಜೆ, ಜನಾರ್ದನ ರೈ ಕೊಲ್ಯ, ಕೋಕಿಲ ಕಮರ್ಕಜೆ, ತೀರ್ಥಕುಮಾರ ಕೋಲ್ಪೆ, ಗಂಗಾಧರ ಗೌಡ ಬಾರ್ಯ ಸಿರಿಬಾಗಿಲು ಮತ್ತು ಅಜಿತ್ ಕುಮಾರ್ ಕೆಂಜಾಳ ಎಂಬವರಿಗೆ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿದರು. ಆರೋಪಿಗಳ ಪರವಾಗಿ ನ್ಯಾಯವಾದಿ ಪುತ್ತೂರಿನ ಮಹೇಶ್ ಕಜೆ ಅವರು ವಾದ ಮಂಡಿಸಿದ್ದರೆಂದು ತಿಳಿದು ಬಂದಿದೆ.