ಕಡಬ: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಕೈಕಂಬದ 3ನೇ ತರಗತಿಯಲ್ಲಿ ಓದುವ ಪುಟ್ಟ ಬಾಲಕಿ ಅಯಾರ ತನ್ನ ಶಾಲೆಯ ಸಮೀಪದ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುತ್ತಿದ್ದಾರೆ, ಇದನ್ನು ನಿಲ್ಲಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದು.
ಪತ್ರವನ್ನು ಮನಗಣಿಸಿ ಅಧಿಕಾರಿಗಳು ತಕ್ಷಣವೇ ಆ ಅಂಗಡಿಗೆ ದಾಳಿ ಮಾಡಿ ಅಂಗಡಿದಾರನಿಗೆ ದಂಡ ವಿಧಿಸಿದೆ.

ಶಾಲಾ ವಠಾರದ 100 ಮೀ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಬಾರದು ಎಂಬ ಕಾನೂನು ಇದ್ದರೂ ಅಂಗಡಿಯಾತ ತಂಬಾಕುಗಳನ್ನು ಮಾರುತ್ತಿದ್ದು ಇದನ್ನು ಮನಗಂಡ ಬಾಲಕಿ ಅಯಾರ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಳು.
ಬಾಲಕಿಯ ಸಮಸ್ಯೆ ಚಿಕ್ಕದಾದರೂ ಕಾನೂನಿನ ಬಗ್ಗೆ ಆಕೆಗಿರುವ ಅರಿವು ಮತ್ತು ಅಕ್ರಮದ ವಿರುದ್ಧ ಧ್ವನಿಯೆತ್ತುವ ಧೈರ್ಯ ಕಂಡು ಖುಷಿಯಾಯಿತು. ಬಾಲಕಿಯ ಪತ್ರ ತಲುಪಿದ ಕೆಲವೇ ಕೆಲವು ಗಂಟೆಗಳ ಒಳಗೆ ನಮ್ಮ ಕಚೇರಿಯ ಸಾರ್ವಜನಿಕ ಕುಂದುಕೊರತೆಗಳ ವಿಭಾಗದ ವಿಶೇಷಾಧಿಕಾರಿಗಳು ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ. ಕೂಡಲೆ ಅಧಿಕಾರಿಗಳ ತಂಡ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ಮಾರುತ್ತಿದ್ದ ಸ್ಥಳಕ್ಕೆ ತೆರಳಿ, ತಪ್ಪಿತಸ್ಥನಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿದೆ.
ಬಾಲಕಿಯ ಕೋರಿಕೆ ಚಿಕ್ಕದಾದರೂ ಸರ್ಕಾರ ತಮ್ಮ ಅಹವಾಲನ್ನೂ ಆಲಿಸಿ, ಸಮಸ್ಯೆ ಬಗೆಹರಿಸುತ್ತದೆ ಎಂಬ ವಿಶ್ವಾಸ ಮಕ್ಕಳಲ್ಲಿ ಬಂದರೆ ತಮ್ಮ ಸುತ್ತಮುತ್ತ ನಡೆಯುವ ಅಕ್ರಮ, ಅನ್ಯಾಯಗಳನ್ನು ಖಂಡಿಸುತ್ತಾರೆ. ಅವರಲ್ಲಿ ಈ ಆತ್ಮಸ್ಥೈರ್ಯ ತುಂಬುವುದು ನಮ್ಮ ಜವಾಬ್ದಾರಿಯಾಗಿದೆ.
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರು ಬಾಲಕಿಯ ನೈಜ ಕಾಳಜಿಯ ಬಗ್ಗೆ ತನ್ನ ಪೇಜ್ ನಲ್ಲಿ ಬರೆದು ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ.