dtvkannada

ಮಂಗಳೂರು: ದಂತ ವೈದ್ಯಕೀಯದಲ್ಲಿ ಪದವಿ ಪೂರೈಸಿದ್ದ ಉಳ್ಳಾಲ ತಾಲೂಕಿನ ನರಿಂಗಾನದ ಯುವತಿ ಇಂದು ಬೆಳಗ್ಗೆ ಪಾಂಡೇಶ್ವರದ ಪಿಜಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತಪಟ್ಟ ಯುವತಿಯನ್ನು ಸ್ವಾತಿ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಎ.ಜೆ. ಆಸ್ಪತ್ರೆಯಲ್ಲಿ ಬಿಡಿಎಸ್ ಪದವಿ ಕಂಪ್ಲೀಟ್ ಮಾಡಿದ ಸ್ವಾತಿಗೆ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಕೆಲಸ ದೊರೆತಿತ್ತು. ಇಂದಿನಿಂದಲೇ (ಮಂಗಳವಾರ) ಕೆಲಸಕ್ಕೆ ಹಾಜರಾಗಬೇಕಿತ್ತು. ನಿನ್ನೆ ತಾಯಿ ಜೊತೆಗೆ ಪಾಂಡೇಶ್ವರ ಕ್ಲಿನಿಕ್‌ಗೆ ಬಂದು ಕೆಲಸದ ಬಗ್ಗೆ ಮಾತನಾಡಿ, ಅಲ್ಲಿನ ಪಿಜಿಯಲ್ಲಿ ಉಳಿದುಕೊಂಡಿದ್ದರು.

ಪಿಜಿಯಲ್ಲಿ ಉಳಿದ ಸ್ವಾತಿ ರಾತ್ರಿ ಮರುದಿನ ಸೇರುವ ಕೆಲಸದ ಬಗ್ಗೆ ತಾಯಿ ಜತೆಗೆ ಮೊಬೈಲ್‌ನಲ್ಲಿ ಮಾತನಾಡಿದ್ದರು. ಆಗ ವಿಪರೀತ ತಲೆನೋವು ಎಂದು ತಾಯಿಗೆ ಹೇಳಿದ್ದ ಸ್ವಾತಿ, ನಾಳೆ ಮಾತನಾಡುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದರು.

ಮಲಗಿದ್ದ ಸ್ವಾತಿಯ ದೇಹ ಬೆಳಗ್ಗೆ ತಣ್ಣಗಾಗಿತ್ತು. ವಿಷಯ ಪಿಜಿಯ ಸೂಪರ್ ವೈಸರ್ ಗಮನಕ್ಕೆ ಬಂದಾಗ ತಕ್ಷಣ ಆಂಬ್ಯುಲೆನ್ಸ್ ತರಿಸಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಸ್ವಾತಿಯ ಪ್ರಾಣ ಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ತಿಳಿಸಿದ್ದರು.

ಸ್ವಾತಿ ಬಾಯಲ್ಲಿ ನೊರೆ ಬಂದಿತ್ತು ಎಂದು ಜೊತೆಗಿದ್ದವರು ತಿಳಿಸಿದ್ದಾರೆ. ಏನೋ ಫಿಟ್ಸ್ ಕಾಯಿಲೆ ಇದ್ದಿರುವ ಬಗ್ಗೆ ಪೊಲೀಸರಿಗೆ ಮನೆಯವರು ಹೇಳಿದ್ದಾರೆ. ಘಟನೆ ಬಗ್ಗೆ ಮನೆಮಂದಿ ಸಂಶಯ ವ್ಯಕ್ತಪಡಿಸಿಲ್ಲ ಪೊಲೀಸರು ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!