ತುಮಕೂರು: ದೇಶದಲ್ಲಿ ಬುರ್ಕಾ ಧಾರಣೆಯನ್ನು ನಿಷೇಧಿಸಬೇಕು ಎಂಬ ಹೇಳಿಕೆ ನೀಡಿದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಬುರ್ಹಾನ್ ಎಂಬುವವರು ದೂರು ನೀಡಿದ್ದು, ಧಾರ್ಮಿಕ ಭಾವನೆ ಹಾನಿ ಮಾಡುವ ಉದ್ದೇಶದಿಂದ ಮಾಜಿ ಸಚಿವ ಸೊಗಡು ಶಿವಣ್ಣ ಬುರ್ಕಾ ನಿಷೇಧದ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತ, ಪಾಕಿಸ್ತಾನದಲ್ಲಿ ಇರುವವರೆಲ್ಲರೂ ತಾಲಿಬಾನಿಗಳು. ನಮ್ಮಲ್ಲೂ ತಾಲಿಬಾನಿಗಳಿದ್ದಾರೆ. ಬುರ್ಕಾ ಸಂಸ್ಕೃತಿಯನ್ನು ಬೆಂಬಲಿಸುವವರು ತಾಲಿಬಾನಿಗಳು ಎಂದು ಅವರು ಹೇಳಿಕೆ ನೀಡಿದ್ದರು. ಅಲ್ಲದೇ ಅಂತವರ ಜತೆಗೆ ಸಂಬಂಧ ಹೊಂದಿದ್ದರೆ ಆ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಅವರು ಹೇಳಿದ್ದರು.