ದೇವದುರ್ಗ: ಕಾಮುಕರ ಕ್ರೌರ್ಯಕ್ಕೆ ಮಾನಸಿಕ ಅಸ್ವಸ್ಥೆ ಮಹಿಳೆಯೊಬ್ಬರು ಗರ್ಭಿಣಿಯಾಗಿರುವ ಘಟನೆ ನಡೆದಿದೆ. ಮಹಿಳೆಯು ಇದೀಗ ಆರೈಕೆ ಇಲ್ಲದೇ ಪಟ್ಟಣದ ಹಾದಿ ಬೀದಿಯಲ್ಲಿ ಅಲೆಯುವಂತಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಸ್ವಾಂತನ ಕೇಂದ್ರಗಳು ಈ ಮಾನಸಿಕ ಅಸ್ವಸ್ಥ ಗರ್ಭಿಣಿ ನೆರವಿಗೆ ಬಾರದ ಹಿನ್ನೆಯಲ್ಲಿ ಬೆಳಗ್ಗೆ ಹಾದಿಬೀದಿ ಅಲೆದು ರಾತ್ರಿ ಹೊತ್ತು ಯಾವುದಾದರೂ ಅಂಗಡಿ ಮುಂದೆ ಅಥವಾ ಬಸ್ ನಿಲ್ದಾಣದಲ್ಲಿ ಜೀವನ ಕಳೆಯುತ್ತಿದ್ದಾಳೆ.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಗರ್ಭಿಣಿ ಹಲವು ಸಮಸ್ಯೆ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಸ್ವಾಂತನ ಕೇಂದ್ರವಿದ್ದರೂ ಮಾನಸಿಕ ಆರೈಕೆ ಮಾಡುವುದಿರಲಿ ಗುರುತಿಸುವ ಗೋಜಿಗೂ ಹೋಗಿಲ್ಲ. ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಇಂತಹ ಮಾನಸಿಕ ಅಸ್ವಸ್ಥರ ಆರೋಗ್ಯ, ಊಟ, ವಸತಿ ಸೇರಿ ಆರೈಕೆ ಮಾಡಲು ಸರ್ಕಾರ ಲಕ್ಷಾಂತರ ರೂ.ಅನುದಾನ ನೀಡುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ.
ಹಾದಿ ಬೀದಿಯಲ್ಲಿ ಅಲೆದು, ಮನೆ ಮನೆಗಳಿಗೆ ತಿರುಗಿ ಕಂಡ ಕಂಡವರ ಹತ್ತಿರ ಕೈ ಚಾಚಿ ಊಟ ಮಾಡುತ್ತಿರುವ ಸ್ಥಿತಿ ಕರುಣಾಜನಕವಾಗಿದೆ. ಇಂತಹವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ, ಬಳ್ಳಾರಿ ಮಹಿಳಾ ಆರೈಕೆ ಕೇಂದ್ರಕ್ಕೆ ಬಿಡಲು ಅಧಿಕಾರಿಗಳು ಕಾಳಜಿ ವಹಿಸಬೇಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಕಣ್ತೆರೆಯಬೇಕಿದೆ.