ಪುತ್ತೂರು: ಹೆತ್ತು, ಹೊತ್ತು ಸಾಕಿದ ತಾಯಿಯನ್ನೇ ಬಲವಂತವಾಗಿಸಿ ಅತ್ಯಾಚಾರಗೈದು ವಿಕೃತಿ ಮೆರೆದಿದ್ದ ಆರೋಪಿಯನ್ನು ಸಂಪ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರು ನಿವಾಸಿ ಜಯರಾಮ ರೈ ಬಂಧಿತ ಆರೋಪಿ.
ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಆರೋಪಿ ಮಗನನ್ನು ಬಂಧಿಸಲಾಗಿದೆ.
58 ವರ್ಷ ಪ್ರಾಯದ ತನ್ನ ತಾಯಿಯೊಂದಿಗೆ ವಾಸವಾಗಿರುವ ಜಯರಾಮ ಜ.12ರಂದು ಎಂದಿನಂತೆ ರಾತ್ರಿ ಊಟ ಮಾಡಿ ಅವರ ರೂಮ್ ನಲ್ಲಿ ಮಲಗಿದ್ದ. ಮುಂಜಾನೆ 3 ಗಂಟೆಯ ವೇಳೆಗೆ ತಾಯಿ ಮಲಗಿದ್ದ ರೂಮ್ ಗೆ ಹೋಗಿ ಜಯರಾಮ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ತಾಯಿ ಆತನನ್ನು ತಳ್ಳಿ ಬೊಬ್ಬೆ ಹಾಕಿದಾಗ ಆತ ತಾಯಿಯ ಬಾಯಿಯನ್ನು ಬಟ್ಟೆಯಿಂದ ಒತ್ತಿ ಹಿಡಿದು ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿ ತಾಯಿ ಪ್ರತಿಭಟಿಸಿದರೂ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ.
ಈ ವಿಚಾರವನ್ನು ಯಾರಲ್ಲಾದರೂ ತಿಳಿಸಿದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಜ.13ರಂದು ಬೆಳಿಗ್ಗೆ 07.45ಕ್ಕೆ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಜಯರಾಮ ಬಲವಂತದಿಂದ ಅವರನ್ನು ಮನೆಯ ಹಾಲ್ಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಪ್ರಕರಣ ದಾಖಲಿಸಲಾಗಿದೆ.
ಮಗನ ಕೃತ್ಯದಿಂದ ಅಸ್ವಸ್ಥಗೊಂಡಿರುವ ಮಹಿಳೆ ಮಧ್ಯಾಹ್ನ 1 ಗಂಟೆಗೆ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿ, ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ. ಬಲವಂತವಾಗಿ ಅತ್ಯಾಚಾರ ನಡೆಸಿ, ಜೀವ ಬೆದರಿಕೆ ಒಡ್ಡಿದ ಮಗ ಜಯರಾಮನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ದೂರು ನೀಡಿದ್ದರು. ದೂರು ಸ್ವೀಕರಿಸಿಕೊಂಡಿರುವ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376(2)(n)506 ರಂತೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಹೆತ್ತ ತಾಯಿಯನ್ನೇ ಅತ್ಯಾಚಾರ ಗೈದ ನೀಚ ಅರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂಬಂಧಗಳ ಅರಿವೇ ಇಲ್ಲದ ಪಾಪಿ ಮಗ ತನ್ನ ತಾಯಿಯ ಮೇಲೆಯೇ ಅಮಾನವೀಯ ಕೃತ್ಯ ಎಸಗಿ ಊರವರು ತಲೆತಗ್ಗಿಸುವಂತಾಗಿದೆ.
ಸಂತ್ರಸ್ತ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಆರೋಪಿ ಜಯರಾಮ ತಾಯಿಯ ಜೊತೆಯೇ ವಾಸವಾಗಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮಗನಿಗೆ ಮೂರೊತ್ತು ಅನ್ನ ಬೇಯಿಸಿ ಕೊಡುತ್ತಿದ್ದಳು. ಆದರೆ ಎದೆಹಾಲು ಕುಡಿದ ಪಾಪಿ ಮಗನೇ ಇಂತಹ ನೀಚ ಕೃತ್ಯ ಎಸಗಿರುವುದು ಊರವರಲ್ಲಿ ಅಸಹ್ಯ ಮೂಡಿಸಿದೆ. ಈ ಪ್ರಕರಣವು ಕರಾವಳಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.