ಪುತ್ತೂರು: ಶಿರಾಡಿ ಘಾಟಿಯಲ್ಲಿ ವಿಷಕಾರಿಯಾದ ನಕಲಿ ಗೋಡಂಬಿ ಮಾರಾಟ ಮಾಡುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಅಪಪ್ರಚಾರ ಮಾಡುತ್ತಿರುವ ಕಾಣದ ಕೈಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರಿನ ಗೋಡಂಬಿ ವ್ಯಾಪಾರಸ್ಥರು ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಿಸಿರುತ್ತಾರೆ.
ಈ ಬಗ್ಗೆ ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವ್ಯಾಪಾರಸ್ಥರು ಕಿಡಿಗೇಡಿಗಳ ಅಪಪ್ರಚಾರದಿಂದ ನಮ್ಮ ವ್ಯಾಪಾರಕ್ಕೆ ಧಕ್ಕೆಯಾಗಿದ್ದು ಸಮಾಜದ ಮುಂದೆ ತಲೆತಗ್ಗಿಸುವಂತಾಗಿದೆ. ನಾವು ಜಿ.ಎಸ್.ಟಿ ಪಾವತಿಸಿ ವ್ಯಾಪಾರ ನಡೆಸುತ್ತಿದ್ದು ಆಹಾರ ಇಲಾಖೆ ಸೇರಿದಂತೆ ಎಲ್ಲಾ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಹಲವಾರು ವರ್ಷಗಳಿದೆ ವ್ಯಾಪಾರ ಮಾಡುತ್ತಾ ಇದ್ದೇವೆ. ವಿಟ್ಲ ಸಮೀಪದ ಹೆಸರಾಂತ ಗೋಡಂಬಿ ಕಾರ್ಖಾನೆಯಾದ ವೆಂಕಟೇಶ್ವರ ಫ್ಯಾಕ್ಟರಿಯಿಂದ ರಖಂ ಆಗಿ ಗೋಡಂಬಿ ಖರೀದಿಸಿ ಸಣ್ಣ ಲಾಭಾಂಶವಿಟ್ಟು ಮಾರಾಟ ಮಾಡುತ್ತಿದ್ದೇವೆ. ಇದು ಇದುವರೆಗೆ ಗ್ರಾಹಕರನ್ನು ಲೂಟಿಮಾಡುತ್ತಿರುವ ಬ್ರಹತ್ ಗೋಡಂಬಿ ಮಾಫಿಯಾದ ಕೆಂಗಣ್ಣಿಗೆ ಬಿದ್ದು ನಮ್ಮ ವಿರುದ್ಧ ನಿರಂತರ ಷಡ್ಯಂತರ ನಡೆಸಿ ಮಾನಸಿಕ ಹಾಗೂ ವ್ಯಾವಹಾರಿಕ ಕಿರುಕುಳ ನೀಡುತ್ತಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಎಂದಿನಂತೆ ಸಹಕಾರ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಝೀಜ್, ಶರೀಫ್, ಫಾರೂಖ್, ಅಲಿ ಅಬ್ಬಾಸ್ ಹಾಗೂ ಇಬ್ರಾಹಿಂ ಉಪಸ್ಥಿತರಿದ್ದರು