ಸುಳ್ಯ: ಸುಳ್ಯದಲ್ಲಿ ಇಂದು ಬೆಳಿಗ್ಗೆ ಸುಮಾರು ಗಂಟೆ 9.12 ರಿಂದ 9:15ರ ಆಸುಪಾಸು ಲಘು ಭೂಕಂಪನದ ಅನುಭವವಾಗಿದೆ. ಬೆಳಂಬೆಳಗ್ಗೆ ಭೂಕಂಪನದಿಂದ ಸುಳ್ಯ ಭಾಗದ ಜನರು ಭಯಭೀತರಾಗಿದ್ದಾರೆ.
ಸುಳ್ಯ, ಮರ್ಕಂಜ, ಪೆರಾಜೆ, ಗೂನಡ್ಕ, ಕಲ್ಲುಗುಂಡಿ, ಅರಂತೋಡು ,ಐವರ್ನಾಡು,ಆಲೆಟ್ಟಿ, ತೊಡಿಕಾನಗಳಲ್ಲಿಯೂ ಕಂಪನದ ಅನುಭವವಾದ ಬಗ್ಗೆ ತಿಳಿದು ಬಂದಿದೆ. ಸುಮಾರು 45 ಸೆಕೆಂಡುಗಳ ಕಾಲ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಇದರಿಂದಾಗಿ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿವೆ. ಕೆಲವೆಡೆ ಗೋಡೆ ಸಣ್ಣದಾಗಿ ಬಿರುಕುಬಿಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭೂಕಂಪನದ ಪರಿಣಾಮ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಪಿ. ಕೆ. ಅಬೂಸಾಲಿ ಅವರ ಮನೆ ಗೋಡೆಗಳು ಬಿರುಕು ಬಿಟ್ಟಿವೆ ಎಂದು ತಿಳಿದು ಬಂದಿದೆ.
ಮಡಿಕೇರಿ ತಾಲೂಕು ಹಾಗೂ ಕೊಡಗು ಗಡಿಗೆ ಹೊಂದಿಕೊಂಡಿರುವ ದ.ಕ ಜಿಲ್ಲೆಯ ಸುಳ್ಯ , ಮರ್ಕಂಜ , ಪೆರಾಜೆ , ಗೂನಡ್ಕ , ಕಲ್ಲುಗುಂಡಿ , ಅರಂತೋಡು , ತೊಡಿಕಾನ ,ಐವರ್ನಾಡು , ಸಂಪಾಜೆ ಭಾಗದಲ್ಲೂ ಕಂಪಿಸಿದೆ ಎಂದು ತಿಳಿದು ಬಂದಿದೆ.
ಭೂಮಿ ಕಂಪಿಸಿರುವುದರ ಬಗ್ಗೆ ಇಲಾಖೆ ಇನ್ನಷ್ಟೇ ಅಧಿಕೃತಪಡಿಸಬೇಕಿದೆ.