ರಾಯಚೂರು: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಆರು ಜನ ಸ್ಥಳದಲ್ಲೇ ದುರ್ಮರಣಕ್ಕೀಡಾದ ಹೃದಯವಿದ್ರಾವಕ ಘಟನೆ ಯಾದಗಿರಿಯ ಗುರುಮಿಠಕಲ್ ಬಳಿ ಸಂಭವಿಸಿದೆ.
ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.
ಒಂದು ವರ್ಷದ ಹೆಣ್ಣು ಮಗು ಸೇರಿ ಆರು ಜನ ಮೃತಪಟ್ಟಿದ್ದಾರೆ. ಮೃತ ದುರ್ದೈವಿಗಳು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿಯವರು ಎಂದು ತಿಳಿದು ಬಂದಿದೆ.
ಹಟ್ಟಿ ಗ್ರಾಮದ ವಿದ್ಯುತ್ ಗುತ್ತಿಗೆದಾರ ವಾಜೀದ್ ಹುಸೇನ್ (35), ಅವರ ತಂದೆ ಮಜರ್ ಹುಸೇನ್ (72), ತಾಯಿ ನೂರ್ ಜಹಾನ್ (70), ಪತ್ನಿ ಹೀನಾ (30), ಮಕ್ಕಳಾದ ಉಮೇಜಾ (6 ತಿಂಗಳು), ಇಮ್ರಾನ್ (22) ಮೃತ ದುರ್ದೈವಿಗಳು.
ತೆಲಂಗಾಣದ ಕೊಡಂಗಲ್ ನ ದರ್ಗಾಕ್ಕೆ ಜವಳ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.
ಘಟನೆ ಬಗ್ಗೆ ಎಸ್ಪಿ ಪ್ರತಿಕ್ರಿಯೆ
ಕಾರು ಮತ್ತು ಗೂಡ್ಸ್ ವಾಹನದ ಮದ್ಯೆ ಅಪಘಾತ ನಡೆದಿದೆ. ಸ್ಯಾಂಟ್ರೋ ಕಾರಿನಲ್ಲಿ ಒಂದೇ ಕುಟುಂಬದವರು ಇದ್ದರೂ, ಎಲ್ಲರೂ ಜವಳ ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ದುರಂತದಲ್ಲಿ ಆರು ಜನ ಮೃತಪಟ್ಟಿದ್ದು, ಒಂದು ಮಗು ಕೂಡ ಸೇರಿದೆ. ಮಹ್ಮದ್ ವಾಜೀದ್ ಹುಸೇನ್ ಅವರ ಆರು ತಿಂಗಳ ಮಗಳು ಉಮೇಜಾಳ ಜವಳ ಇತ್ತು. ಇದಕ್ಕಾಗಿ ವಾಜೀದ್ ಅವರು ತಂದೆ, ತಾಯಿ, ಪತ್ನಿ ಅಳಿಯ ಹಾಗೂ ಇಬ್ಬರು ಮಕ್ಕಳ ಜೊತೆ ಹೋಗಿದ್ದರು. ಕಾರಿನಲ್ಲಿ ಏಳು ಜನರು ತೆರಳಿದ್ದರು. ಅದರಲ್ಲಿ ಆರು ಜನ ಮೃತ ಪಟ್ಟಿದ್ದಾರೆ. ಮೂರು ವರ್ಷದ ಮಗು ಫಾಜೀಲ್ ಬದುಕುಳಿದಿದೆ ಫಾಜೀಲ್ ಗೆ ಕಲಬುರ್ಗಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಪಿ ವೇದಮೂರ್ತಿ ಘಟನೆ ಬಗ್ಗೆ ಮಾಹಿತಿ ನೀಡಿದರು.