ವಿಜಯಪುರ(ಜ.02): ಉತ್ತರ ಕರ್ನಾಟಕದ ನಡೆದಾಡುವ ದೇವರೆಂದೇ ಗುರುತಿಸಿಕೊಂಡಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳು(81) ವಿಧಿವಶರಾಗಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ.
ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು 1941ರ ಅಕ್ಟೋಬರ್ 24ರಂದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದರು. ತಂದೆ ಹೆಸರು ಓಗೆಪ್ಪಗೌಡ ಸಿದ್ದಗೊಂಡ ಪಾಟೀಲ್, ತಾಯಿ ಹೆಸರು ಸಂಗಮ್ಮ ಓಗೆಪ್ಪಗೌಡ ಪಾಟೀಲ್. ಪುಣ್ಯ ದಂಪತಿಗಳಿಗೆ 6 ಜನ ಮಕ್ಕಳು. ಶ್ರೀಗಳ ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ.
ಶ್ರೀಗಳು ಬಾಲ್ಯದಿಂದಲೇ ಆದ್ಯಾತ್ಮದ ಕಡೆ ಒಲವು ಬೆಳಸಿಕೊಂಡವರು.
ಗದಗ ನಗರದ ಕಳಸಾಪೂರ ರಸ್ತೆಯ ಶಿವಾನಂದ ಮಠ 1930ರಲ್ಲಿ ಶಿವಾನಂದ ಶ್ರೀಗಳು ಸ್ಥಾಪನೆ ಮಾಡಿದ್ದಾರೆ. ಶಿವಾನಂದ ಶ್ರೀಗಳಿಗೆ ಸುಮಾರ 70 ರಿಂದ 80 ಜನ ಶಿಷ್ಯರು. ಈ ಶಿಷ್ಯರಲ್ಲಿ ಮೊದಲಿಗರಾಗಿ ಮಲ್ಲಿಕಾರ್ಜುನ ಶ್ರೀಗಳು ಇದ್ದರು. ಗದಗಿನ ಶಿವಾನಂದ ಮಠ ಅದ್ವೈತ ಸಂಪ್ರದಾಯ ಮಠ. ಶಿವಾನಂದ ಪರಂಪರೆಯ ನೂರಾರು ಶಾಖಾ ಮಠಗಳು ರಾಜ್ಯ, ಹೊರರಾಜ್ಯಗಳಲ್ಲಿ ಇವೆ. ಈ ಮಠದ ಸಂಪ್ರದಾಯ ಅಂದರೆ ಇಲ್ಲಿ ಜಾತಿ, ಬೇಧ, ಪಂಥ ಅನ್ನೋ ಕಟ್ಟಳೆಗಳಿಲ್ಲ. ಜಾತ್ಯಾತೀತ ನಿಲುವು ಹೊಂದಿರುವ ಮಠವಿದು. ಈ ಮಠದಲ್ಲಿ ಯಾವುದೇ ಜಾತಿಯ ಅರ್ಹತೆ ಇರುವ ವ್ಯಕ್ತಿಗಳು ದೀಕ್ಷಾ ಪಡೆಯಬಹುದು. ಪೀಠಾಧಿಪತಿಗಳು ಆಗಬಹುದು.
ಸಿದ್ದೇಶ್ವರ ಶ್ರೀಗಳು ಗುರುಗಳಾದ ಮಲ್ಲಿಕಾರ್ಜುನ ಶ್ರೀಗಳು ಶಿವಾನಂದ ಮಠದ ಮೊದಲ ಪೀಠಾಧಿಪತಿಗಳಾದ ಶಿವಾನಂದ ಶ್ರೀಗಳ ಪರಮ ಶಿಷ್ಯರು ಆಗಿದ್ದರು. ಹೀಗಾಗಿ ಮಲ್ಲಿಕಾರ್ಜುನ ಶ್ರೀಗಳು ಶಿವಾನಂದ ಮಠದಲ್ಲೇ ಬೆಳೆದಿದ್ದಾರೆ. ಸುಮಾರು 20 ವರ್ಷಗಳ ಕಾಲ ವರ್ಷ ಗದಗನಲ್ಲಿ ಇದ್ದರು. ಹೀಗಿರುವಾಗ ಶಿವಾನಂದ ಶ್ರೀಗಳು 1930ರಲ್ಲಿ ಮಠ ನಿರ್ಮಾಣ ಕಾರ್ಯ ಕೈಗೊಂಡಿದ್ದರು.
1970ರ ದಶಕದಲ್ಲಿ 20 ವರ್ಷಗಳ ಕಾಲ ಗದಗನ ಶಿವಾನಂದ ಮಠದಲ್ಲಿ ಮಲ್ಲಿಕಾರ್ಜುನ ಶ್ರೀಗಳು ವಾಸವಾಗಿದ್ದರು. ಆದರೆ, ಮಠದ ಕಟ್ಟಡ ಪೂರ್ಣ ಆಗುವ ಮುನ್ನವೇ ಶಿವಾನಂದ ಶ್ರೀಗಳು ಲಿಂಗೈಕ್ಯರಾದರು. ಹೀಗಾಗಿ ಮಲ್ಲಿಕಾರ್ಜುನ ಶ್ರೀಗಳೇ ಮುಂದೆ ನಿಂತು 70ರ ದಶಕದಲ್ಲಿ ಶಿವಾನಂದ ಮಠದ ನಿರ್ಮಾಣ ಕಾರ್ಯ ಮಾಡಿಸಿದರು. ಆಗ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಕೂಡ ತಮ್ಮ ಗುರುಗಳ ಜೊತೆ ಮಠ ನಿರ್ಮಾಣದ ವೇಳೆ ಗದಗನಲ್ಲಿ ಇದ್ದರು.
ಶಿವಾನಂದ ಮಠದ 2ನೇ ಪೀಠಾಧಿಪತಿ: ಸದಾಶಿವಾನಂದ ಶ್ರೀಗಳು, 3ನೇ ಪೀಠಾಧಿಪತಿಗಳು ನಂದೀಶ್ವರ ಶ್ರೀಗಳು, 4ನೇ ಪೀಠಾಧಿಪತಿಗಳು ಅಭಿನವ ಶಿವಾನಂದ ಶ್ರೀಗಳು. 5ನೇ ಪೀಠಾಧಿಪತಿಗಳಾಗಿ ಸಿದ್ದೇಶ್ವರ ಶ್ರೀಗಳ ಶಿಷ್ಯರಾದ ಸದಾಶಿವಾನಂದ ಭಾರತಿ ಶ್ರೀಗಳು ನೇಮಕವಾಗಿದ್ದಾರೆ.
ಜ್ಞಾನಯೋಗಾಶ್ರ ಸ್ಥಾಪನೆ:
ಮುಂದೆ ಮಲ್ಲಿಕಾರ್ಜುನ ಶ್ರೀಗಳು ವಿಜಯಪುರ ಜಿಲ್ಲೆಯ ಕಡೆ ಪ್ರವಾಸ ಬೆಳೆಸುತ್ತಾರೆ. ವಿಜಯಪುರದಲ್ಲಿ ಮಲ್ಲಿಕಾರ್ಜುನ ಶ್ರೀಗಳು ಜ್ಞಾನನಯೋಗಾಶ್ರಮವನ್ನು ಸ್ಥಾಪನೆ ಮಾಡುತ್ತಾರೆ. ಈ ಆಶ್ರಮದಲ್ಲಿ ನಿತ್ಯ ಅಧ್ಯಯನ ಮತ್ತು ಯೋಗದ ಬಗ್ಗೆ ಜ್ಞಾನವನ್ನು ನೀಡುತ್ತಿದ್ದರು. ಮಲ್ಲಿಕಾರ್ಜುನ ಸ್ವಾಮೀಜಿಯವರು, ಸಿದ್ದೇಶ್ವರ ಶ್ರೀಗಳನ್ನು ಜ್ಞಾನನಯೋಗಾಶ್ರಮ ಕರೆತಂದು ತಮ್ಮ ಬಳಿ ಇಟ್ಟುಕೊಂಡರು. ಅಲ್ಲಿ ಶಾಸ್ತ್ರ, ಪ್ರವಚನದ ಜೊತೆಗೆ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮಾಡಿಸಿದರು. ಈ ಆಶ್ರಮದಲ್ಲೂ ಕೂಡ ಕೂಡ ಜಾತಿ, ಮತ, ಪಂಥ ಇಲ್ಲದೆ ಭಾವೈಕ್ಯತೆ ಮಂತ್ರ ಪ್ರತಿಧ್ವನಿಸುತ್ತಿದೆ.
ಸಿದ್ದೇಶ್ವರ ಶ್ರೀಗಳು ಕಾವಿ ಬಟ್ಟೆ ಏಕೆ ತೊಡಲಿಲ್ಲ: ?
ಸಿದ್ದೇಶ್ವರ ಶ್ರೀಗಳ ಗುರುಗಳಾದ ಮಲ್ಲಿಕಾರ್ಜುನ ಶ್ರೀಗಳು ಶ್ವೇತಧಾರಿಗಳಾಗಿದ್ದರು. ಮುಂದೆ ಸಿದ್ದೇಶ್ವರ ಶ್ರೀಗಳು ಕೂಡ ಸನ್ಯಾಸ ದೀಕ್ಷೆ ಪಡೆದ ನಂತರ ಕಾವಿಧರಿಸಲಿಲ್ಲ, ಶ್ವೇತ ಬಟ್ಟೆಗಳನ್ನೇ ಧರಿಸುತ್ತಿದ್ದರು. ಆದರೆ ಪೂಜೆ-ಪುನಸ್ಕಾರದ ಸಮಯದಲ್ಲಿ ಆಗಾಗ ಕಾವಿ ಧರಿಸಿದ್ದರು. ಸಿದ್ದೇಶ್ವರ ಶ್ರೀಗಳು ಮಠ-ಮಾನ್ಯಗಳನ್ನು ಕಟ್ಟಲಿಲ್ಲ. ಇನ್ನೂ ಸಿದ್ದೇಶ್ವರ ಶ್ರೀಗಳು ಧರಿಸುತ್ತಿದ್ದ ಅಂಗಿಗೆ ಜೇಬುಗಳೇ ಇರಲಿಲ್ಲ. 2 ಜತೆ ಬಿಳಿ ಪಂಚೆ, ಅಂಗಿ ಮಾತ್ರ ಹೊಂದಿದ್ದರು. ತಮ್ಮ ಬಟ್ಟೆ ತಾವೇ ಸ್ವಚ್ಛಗೊಳಿಸಿಕೊಳ್ಳುತ್ತಿದ್ದರು.