dtvkannada

ಕೋಝಿಕ್ಕೋಡ್ : ಕೇರಳದ ಕೋಝಿಕ್ಕೋಡ್‌ನಲ್ಲಿ ಭಾನುವಾರ ತಡರಾತ್ರಿ ಚಲಿಸುತ್ತಿದ್ದ ರೈಲಿನ ಬೋಗಿಯೊಂದಕ್ಕೆ ನುಗ್ಗಿದ ಆಗಂತುಕನೊಬ್ಬ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಹಾಗೂ ಒಂಬತ್ತು ಮಂದಿಗೆ ಸುಟ್ಟ ಗಾಯಗಳಾಗಿವೆ.

ಭಾನುವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಅಲಪ್ಪುಝ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.

ಕಣ್ಣೂರು ಜಿಲ್ಲೆಯ ಮಹಿಳೆ, ಸುಮಾರು ಎರಡು ವರ್ಷ ಪ್ರಾಯದ ಹೆಣ್ಣು ಮಗು ಮತ್ತು ಇನ್ನೋರ್ವ ವ್ಯಕ್ತಿಯ ಮೃತದೇಹಗಳು ರೈಲು ಹಳಿಯ ಮೇಲೆ ಪತ್ತೆಯಾಗಿವೆ.
ಗಾಯಗೊಂಡಿರುವ 9 ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಅವರಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಅಪರಿಚಿತ ವ್ಯಕ್ತಿಯೊಬ್ಬ ಪೆಟ್ರೋಲ್ ಮಾದರಿಯ ದ್ರವ ತುಂಬಿದ್ದ ಎರಡು ಬಾಟಲಿಗಳೊಂದಿಗೆ ‘D1’ ಕೋಚ್‌ಗೆ ನುಗ್ಗಿ ಪ್ರಯಾಣಿಕರು ಮತ್ತು ರೈಲಿನ ಬೋಗಿಗೆ ಅದನ್ನು ಚೆಲ್ಲಿ, ಬೆಂಕಿ ಹಚ್ಚಿದ್ದಾನೆ.
ಬೆಂಕಿ ವ್ಯಾಪಿಸುತ್ತಿದ್ದಂತೆ ಕೆಲವು ಪ್ರಯಾಣಿಕರು ರೈಲಿನ ಚೈನ್ ಎಳೆದರು. ರೈಲು ನಿಂತಿದ್ದ ವೇಳೆ ಆರೋಪಿ ಪರಾರಿಯಾಗಿದ್ದಾನೆ.
ಆತನಿಗೂ ಸುಟ್ಟ ಗಾಯಗಳಾಗಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಲೇ ರೈಲಿನಿಂದ ಹಾರಿ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸೋಮವಾರ ಮುಂಜಾನೆ ಹಳಿಗಳ ಮೇಲೆ ಹುಡುಕಾಟ ನಡೆಸಿದಾಗ ಎಳತ್ತೂರು ರೈಲು ನಿಲ್ದಾಣದ ಬಳಿ ಈ ಮೂವರ ಮೃತದೇಹಗಳು ಪತ್ತೆಯಾಗಿವೆ.

ಮೃತರನ್ನು ಕಣ್ಣೂರಿನ ಮಟ್ಟನ್ನೂರ್ ನಿವಾಸಿ ರಹಮತ್ ಮತ್ತು ಅವರ ಸಹೋದರಿಯ ಮಗಳು ಝುಹ್ರಾ ಬತುಲ್ ಹಾಗೂ ಕಣ್ಣೂರಿನ ಕೊಡೋಲಿಪ್ರಮ್ ಮೂಲದ ಮೃತ ನೌಫಿಕ್ ಎಂದು ಗುರುತಿಸಲಾಗಿದೆ,

ರಹ್ಮತ್ ಅವರು ಚಾಲಿಯಂನಲ್ಲಿರುವ ತಮ್ಮ ಸಹೋದರಿಯ ಮನೆಯಲ್ಲಿ ಉಪವಾಸ ಮುರಿಯಲು ಹೋಗಿದ್ದರು. ಅಲ್ಲಿಂದ ಕಣ್ಣೂರಿನ ತನ್ನ ಮನೆಗೆ ಹಿಂದಿರುಗುವಾಗ ತನ್ನ ಸಹೋದರಿ ಜಸೀಲಾ ಅವರ ಮಗಳು ಝುಹ್ರಾ ತನ್ನೊಂದಿಗೆ ಕರೆದೊಯ್ಯುತ್ತಿರು.

ಮೃತ ಝುಹ್ರ, ಚಾಲಿಯಂ ನಿವಾಸಿ ಶುಯಿಬ್ ಸಖಾಫಿ ಹಾಗೂ ಕಾರಂತೂರ್ ಮರ್ಕಝ್ ಶಿಕ್ಷಕಿಯಾಗಿರುವ ಜಸೀಲಾ ದಂಪತಿಯ ಕಿರಿಯ ಮಗಳು ಎನ್ನಲಾಗಿದೆ.
ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಭಯಭೀತರಾಗಿ ಅವರು ಹೊರಗೆ ಹಾರಿದ್ದಾರೆ ಎನ್ನಲಾಗಿದೆ.

ಆರೋಪಿಯ ಸಿ.ಸಿ. ಫೂಟೇಜ್‌ ಲಭಿಸಿದ್ದು, ಕೋಯಿಕ್ಕೋಡ್ ನಗರ ಪೊಲೀಸ್ ಕಮಿಷನರ್ ರಾಜ್‌ಪಾಲ್ ಮೀನಾ ಅವರು ಆರೋಪಿಯ ಶಂಕಿತ ಚಿತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!