ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಯಾರು ಎನ್ನುವುದಕ್ಕೆ ತೆರೆ ಬಿದ್ದಿದೆ. ಅಚ್ಚರಿ ಆಯ್ಕೆಯಾಗಿ ಮಾಜಿ ಸಚಿವ ಯುಟಿ ಖಾದರ್ ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ. ಸ್ಪೀಕರ್ ಸ್ಥಾನಕ್ಕೆ ಹಿರಿಯ ಶಾಸಕಾರದ ಆರ್.ವಿ.ದೇಶಪಾಂಡೆ, ಟಿಬಿ ಜಯಚಂದ್ರ ಹಾಗೂ ಹೆಚ್ಕೆ ಪಾಟೀಲ್ ಇವರಲ್ಲಿ ಒಬ್ಬರನ್ನು ಸ್ಪೀಕರ್ ಮಾಡಲು ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಸಿತ್ತು. ಆದ್ರೆ, ಇವರ ಪೈಕಿ ಯಾರೂ ಸ್ಫೀಕರ್ ಆಗಲು ಒಪ್ಪದಿದ್ದಾಗ ಅಂತಿಮವಾಗಿ ಯುಟಿ ಖಾದರ್ ಅವರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ.
ಹಿರಿಯ ಶಾಸಕರು ಸಭಾಧ್ಯಕ್ಷರಾಗಲು ಹಿಂದೇಟು ಹಿನ್ನಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಯು ಟಿ ಖಾದರ್ಗೆ ಕರೆ ಮಾಡಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲು ಮನವಿ ಮಾಡಿದ್ದಾರೆ. ಈ ಹಿಂದೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೀರಿ. ಪಕ್ಷ ನಿಮ್ಮ ಜೊತೆ ಇದೆ, ನಿಮ್ಮ ಹಿರಿತನಕ್ಕೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ ಎಂದು ಮನವಿ ಮಾಡಿದ್ದಾರೆ.
ಬಳಿಕ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಖಾದರ್ ಅವರ ಜೊತೆ ಚರ್ಚಿಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಿಮವಾಗಿ ಯುಟಿ ಖಾದರ್ ವಿಧಾನಸಭೆ ಸ್ಪೀಕರ್ ಆಗಲು ಒಪ್ಪಿಕೊಂಡಿದ್ದಾರೆ. ಅದರಂತೆ ಇಂದು(ಮೇ 23) ಬೆಳಿಗ್ಗೆ 11 ಗಂಟೆಗೆ ಸಭಾಧ್ಯಕ್ಷ ಸ್ಥಾನಕ್ಕೆ ಯುಟಿ ಖಾದರ್ ನಾಮಪತ್ರ ಸಲ್ಲಿಸಲಿದ್ದು, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ಮೇ 24 ರಂದು ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಅದಕ್ಕಾಗಿ ವಿಧಾನಸಭೆ ಬುಲೆಟಿನ್ ಹೊರಡಿಸಿದ್ದು, ಮಂಗಳವಾರ ಮಧ್ಯಾಹ್ನ 12ರ ಒಳಗೆ ಸ್ಪೀಕರ್ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಬೇಕಾಗುತ್ತದೆ. ಸಾಮಾನ್ಯವಾಗಿ ಅವಿರೋಧ ಆಯ್ಕೆಯಾಗಿರುವ ಸಂಪ್ರದಾಯವಿದೆ.
ಯುಟಿ ಖಾದರ್ ಮಂಗಳೂರು ಕ್ಷೇತ್ರದಿಂದ ಸತತ 5ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಇವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಹಾಗೂ ಆಹಾರ ಸರಬರಾಜು ಇಲಾಖೆ ಸಚಿವರಾಗಿದ್ದರು. ಅಲ್ಲದೇ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕರಾಗಿದ್ದರು.
ಇನ್ನು ಕರ್ನಾಟಕ ಕಾಂಗ್ರೆಸ್ನ ಬಣ ರಾಜಕಾರಣ ಸಚಿವ ಸಂಪುಟ ರಚನೆಯಲ್ಲೂ ಮುಂದುವರಿದಿದೆ. ತಮ್ಮ ಬೆಂಬಲಿಗರನ್ನು ಸಂಪುಟದಲ್ಲಿ ಸೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸರ್ಕಸ್ ನಡೆಸುತ್ತಿದ್ದು, ಯಾರಿಗೆ ಮಣೆ ಹಾಕಬೇಕೆಂದು ಹೈಕಮಾಂಡ್ಗ್ ತಲೆ ಬಿಸಿಯಾಗಿದೆ