dtvkannada

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸರ್ಕಾರ ರಚನೆ ಮಾಡಿದ್ದು, ಮುಲ್ಲಾ ಮೊಹಮ್ಮದ್​ ಹಸನ್​ ಅಕುಂದ್​ ನೂತನ ಪ್ರಧಾನಿಯಾಗಿ ಅಧಿಕಾರಕ್ಕೆ ಏರಿದ್ದಾರೆ. ಈ ಸರ್ಕಾರ ರಚನೆ ಬೆನ್ನಲ್ಲೇ ತಮ್ಮ ನೀತಿ ಹೇಗಿರಲಿದೆ ಎಂಬ ಬಗ್ಗೆಯೂ ಅವರು ಪ್ರಕಟಣೆ ಹೊರಡಿಸಿದ್ದಾರೆ. ಇಲ್ಲಿನ ಎಲ್ಲ ಸಮಸ್ಯೆಗಳನ್ನೂ ನ್ಯಾಯ ಸಮ್ಮತವಾಗಿ ಮತ್ತು ಸಮಂಜಸವಾದ, ಸೂಕ್ತವಾದ ವಿಧಾನಗಳ ಮೂಲಕ ಬಗೆಹರಿಸುವುದೇ ನಮ್ಮ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ.  

ನಾವು ಕಳೆದ 20ವರ್ಷಗಳಿಂದ ಎರಡು ಬಹುದೊಡ್ಡ ಗುರಿಯನ್ನು ಇಟ್ಟುಕೊಂಡು ಹೋರಾಟ ನಡೆಸಿದ್ದೆವು. ಅದರಲ್ಲಿ ಮೊದಲನೇಯದು, ಈ ದೇಶ ಅಫ್ಘಾನಿಸ್ತಾನವನ್ನು ವಿದೇಶಿ ಅತಿಕ್ರಮಣ, ಆಕ್ರಮಣದಿಂದ ಮುಕ್ತಗೊಳಿಸಿ, ಸ್ವತಂತ್ರಗೊಳಿಸುವುದು ಮತ್ತು ಎರಡನೇಯದು, ದೇಶವನ್ನು ಸಂಪೂರ್ಣ, ಸ್ವತಂತ್ರ ಮತ್ತು ಸ್ಥಿರವಾದ ಇಸ್ಲಾಂ ಕೇಂದ್ರವನ್ನಾಗಿ ಪರಿವರ್ತಿಸುವುದು ಎಂದು ತಮ್ಮ ಪ್ರಕಟಣೆಯಲ್ಲಿ ತಾಲಿಬಾನಿಗಳು ಉಲ್ಲೇಖಿಸಿದ್ದಾರೆ.

ಪವಿತ್ರ ಷರಿಯಾ ಕಾನೂನು ಜಾರಿ
ಎಲ್ಲದಕ್ಕೂ ಮಿಗಿಲಾಗಿ, ಅಫ್ಘಾನಿಸ್ತಾನದಲ್ಲಿ ನಮ್ಮ ಆಡಳಿತಕ್ಕೆ ಸಂಬಂಧಪಟ್ಟ ಎಲ್ಲ ವಿಚಾರಗಳು, ವಿಧಾನಗಳೂ, ಜನರ ಜೀವನ ಕ್ರಮಗಳು ಎಲ್ಲವೂ ಪವಿತ್ರ ಷರಿಯಾ ಕಾನೂನಿನಂತೆಯೇ ನಡೆಯಲಿವೆ. ಇನ್ನುಮುಂದೆ ಇಡೀ ಅಫ್ಘಾನಿಸ್ತಾವನ್ನು ಷರಿಯಾ ಕಾನೂನೇ ಮುನ್ನಡೆಸಲಿದೆ ಎಂದು ತಾಲಿಬಾನ್ನ ಸುಪ್ರೀಂ ನಾಯಕನಾಗಿರುವ ಮೌಲವಿ ಹಿಬತುಲ್ಲಾ ಅಕುಂದಜಾದ ಹೊರಡಿಸಿರುವ ಈ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ.

ಹಾಗೇ, ಈ ದೇಶದಲ್ಲಿ ಎಲ್ಲ ಬುದ್ಧಿವಂತ, ವೃತ್ತಿಪರ ಜನರು, ವಿದ್ವಾಂಸರು, ಪ್ರಾಧ್ಯಾಪಕರು, ವೈದ್ಯರು, ಇಂಜನಿಯರ್ಗಳು, ವಿಜ್ಞಾನಿಗಳು, ರಾಷ್ಟ್ರದ ಉದ್ಯಮಿಗಳಿಗೆ ನಮ್ಮ ಇಸ್ಲಾಮಿಕ್ ಎಮಿರೇಟ್ನಿಂದ ಏನೇನೂ ಸಮಸ್ಯೆ ಮಾಡುವುದಿಲ್ಲ. ಅವರ ಅಗತ್ಯಗಳನ್ನು ಪೂರೈಸಿ, ಅವಕಾಶ ಒದಗಿಸಲಾಗುವುದು. ಖಂಡಿತ ಅಂಥವರಿಗೆ ಗೌರವ ಇದ್ದೇ ಇದೆ ಎಂದೂ ಭರವಸೆ ನೀಡಲಾಗಿದೆ. ಅಷ್ಟೇ ಅಲ್ಲ, ಈ ಪ್ರತಿಭಾವಂತರು ಬೇರೆಲ್ಲೂ ಪಲಾಯನ ಮಾಡದೆ, ಈ ದೇಶಕ್ಕಾಗಿಯೇ ದುಡಿಯಬೇಕು. ಅವರ ಮಾರ್ಗದರ್ಶನ, ಕೆಲಸ ನಮಗೆ ಬೇಕು ಎಂದೂ ಹೇಳಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!