ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಆರೋಪಿಯನ್ನು 24 ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕ್ಯಾಬ್ ಚಾಲಕ ದೇವರಾಜ್ ಎಂಬ ವ್ಯಕ್ತಿಯನ್ನು ಜೀವನ್ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 24ಗಂಟೆಯೊಳಗೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.
ಜೀವನ್ ಭೀಮಾನಗರ ಠಾಣೆಗೆ ಸಂತ್ರಸ್ತ ಮಹಿಳೆ ದೂರಿನ ಮೇರೆಗೆ ದೂರು ದಾಖಲಾಗಿದೆ. ತಕ್ಷಣ ಪೊಲೀಸ್ ಕಾರ್ಯಪ್ರವೃತ್ತರಾಗಿದ್ದಾರೆ. ಮೂರು ತಂಡ ರಚಿಸಿ ಆರೋಪಿ ಪತ್ತೆ ಕೆಲಸ ಮಾಡಲಾಗಿದ್ದು, ಐಪಿಸಿ ಸಿಆರ್ ಪಿಸಿ ಅಡಿ ತನಿಖೆ ನಡೆಸಲಾಗುತ್ತಿದೆ. ತನಿಖೆ ನಡೆಸಿದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ತನಿಖೆ ಆದ ನಂತ್ರ ಕೆಲವು ವಿಷಯಗಳು ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ಯಾಬ್ ಚಾಲಕನನ್ನು ಡಿಸಿಪಿ ಶರಣಪ್ಪ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಘಟನೆ..?
ಕ್ಯಾಬ್ ಚಾಲಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಈ ಘಟನೆ ಹೆಚ್ ಎಸ್ ಆರ್ ಲೇಔಟ್ನ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ. ಆರೋಪ ಮಾಡಿರುವ ಯುವತಿ ಜೀವನ್ ಭೀಮಾನಗರದಲ್ಲಿ ಕೆಲಸ ಮಾಡುತ್ತಿದ್ದಳು. ನಿನ್ನೆ ರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳಲು ಈಕೆ ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಏರಿದ ಯುವತಿ ಚಾಲಕನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾಳೆ.
ಇತ್ತ ಕ್ಯಾಬ್ ಚಾಲಕ, ಯುವತಿ ಕುಡಿದ ಮತ್ತಿನಲ್ಲಿದ್ದಳು. ಅರೆಪ್ರೆಜ್ಞೆ ಅವಸ್ಥೆಯಲ್ಲಿದ್ದ ಯುವತಿ, ಮನೆ ಜಾಗ ಬಂದರೂ ಇಳಿಯಲಿಲ್ಲ. ಹೀಗಾಗಿ ಆಕೆಯನ್ನು ಇಳಿಸಲು ಹೋದೆ. ಆಗ ಆಕೆ ನನ್ನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಸದ್ಯ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಮಾಹಿತಿ ಕಲೆಹಾಕುತ್ತಿದ್ದಾರೆ.