ಪುತ್ತೂರು, ಅ.2: ಸುದಾನ ವಸತಿಯುತ ಶಾಲೆಯಲ್ಲಿ ಗಾಂಧಿ ಜಯಂತಿಯ ರಾಷ್ಟ್ರೀಯ ದಿನಾಚರಣೆಯನ್ನು ಸರ್ವಧರ್ಮ ಪ್ರಾರ್ಥನೆಯ ಮೂಲಕ ಆಚರಿಸಲಾಯಿತು.
ಸ್ವಚ್ಛತೆ, ಸ್ವಾವಲಂಬಿತ್ವಗಳ ಪ್ರತಿಪಾದಕರಾಗಿದ್ದ ಗಾಂಧೀಜಿ ಅವರ ಕನಸನ್ನು ನನಸು ಮಾಡುವ ಸಂಕಲ್ಪ ತೊಡೋಣ, ಸತ್ಯ-ಅಹಿಂಸೆಗಳ ಹಾಗೂ ಸರಳತೆಯ ಹಾದಿಯಲ್ಲಿ ನಡೆದು ಗುರಿ ಮುಟ್ಟಬೇಕು ಎಂಬ ಶಪಥದೊಂದಿಗೆ ಸುದಾನ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗಾಂಧೀಜಿ ಹಾಗೂ ಶಾಸ್ತ್ರೀಜಿ ಜನ್ಮದಿನಾಚರಣೆಯನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಭಗವದ್ಗೀತೆ, ಬೈಬಲ್, ಬೌದ್ಧ, ಜೈನಧರ್ಮ ಮತ್ತು ಕುರಾನ್ ಗ್ರಂಥಗಳ ಸಂದೇಶವನ್ನು ವಾಚಿಸಿದರು. ಶಾಲಾ ಸಂಚಾಲಕರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಪುತ್ತೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ರೆವರೆಂಡ್ ಫಾದರ್ ವಿಜಯ ಹಾರ್ವಿನ್, ಶಾಲಾ ಮುಖ್ಯಶಿಕ್ಷಕಿ ಶೋಭಾ ನಾಗರಾಜ್ ಹಾಗೂ ಸ್ಕೌಟ್ ಗೈಡ್ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರೀಮತಿ ರೇಖಾ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶ್ರೀಮತಿ ಶೈನಿ ವಂದಿಸಿದರು.