ಉಪ್ಪಿನಂಗಡಿ: ಇಲ್ಲಿನ ಇಳಂತಿಲ ಎಂಬಲ್ಲಿ ನಿನ್ನೆ ರಾತ್ರಿ ಐವರು ಮುಸ್ಲಿಂ ಯುವಕರ ಮೇಲೆ ತಲವಾರು ದಾಳಿ ನಡೆದಿದ್ದು, ದಾಳಿಗೊಳಗಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದೀಕ್ ಹಾಗೂ ಝಕರಿಯ ಎಂಬವರನ್ನು ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ ನಿಯೋಗ ಆಸ್ಪತ್ರೆಗೆ ಭೇಟಿ ಮಾಡಿತು.
![](http://dtvkannada.in/wp-content/uploads/2021/12/IMG-20211207-WA0017-1024x683.jpg)
ದ.ಕ ಜಿಲ್ಲಾ ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆಕೆ ದಾಳಿಗೊಳಗಾದ ಯುವಕರಿಗೆ ಸಾಂತ್ವಾನ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದುಷ್ಕರ್ಮಿಗಳು ಅಲ್ಪಸಂಖ್ಯಾತರನ್ನು ಗುರಿಯಾಗಿಸುಕೊಂಡು ನಿರಂತರವಾಗಿ ದುಷ್ಕೃತ್ಯಗಳನ್ನು ನಡೆಸಿ ಗಲಭೆ, ಶಾಂತಿ ಕದಡುವ ಪ್ರಯತ್ನವನ್ನು ಮಾಡುತ್ತಲೇ ಇದೆ.
ಪದೇ ಪದೇ ಹಲ್ಲೆ ಮಾಡಿ ಗೂಂಡಾಗಿರಿ ಮಾಡುತ್ತಿರುವ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಉನ್ನತ ಅಧಿಕಾರಿಗಳಿಗೆ ಕರೆ ಮಾಡಿ ಘಟನೆಯ ಗಂಭೀರತೆಯನ್ನು ತಿಳಿಸಿದರು. ಹಾಗೂ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿಯೂ ಈ ಸಂದರ್ಭದಲ್ಲಿ ಭರವಸೆ ನೀಡಿದರು.
![](http://dtvkannada.in/wp-content/uploads/2021/12/IMG-20211207-WA0019-1024x576.jpg)
![](http://dtvkannada.in/wp-content/uploads/2021/12/IMG-20211207-WA0018.jpg)
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕೋಶಾಧಿಕಾರಿ ಮಹಮ್ಮದ್ ಬಪ್ಪಳಿಗೆ, ಜಿಲ್ಲಾ ಸಂಯೋಜಕರಾದ ಷರೀಫ್ ಅಬ್ಬಾಸ್ ವಳಾಲ್, ಜಿಲ್ಲಾ ಕಾರ್ಯದರ್ಶಿ ಫಯಾಝ್ ಮಂಗಳೂರು, ಇಸ್ಮಾಯಿಲ್ ಬಿ.ಎಸ್ ಹಾಗೂ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಇದರ ಪದಾಧಿಕಾರಿಗಳಾದ ಸಿರಾಜುದ್ದೀನ್ ಪರ್ಲಡ್ಕ, ಜಾಪು ಸವಣೂರು ಮತ್ತು ಅಬೂಸ್ವಾಲಿ ಅಹ್ಮದ್ ಉಪಸ್ಥಿತರಿದ್ದರು.
ನಿನ್ನೆ ರಾತ್ರಿ ಜಯರಾಮ ಹಾಗೂ ಸುಮಾರು 30 ಮಂದಿಯ ತಂಡ ಸೇರಿ ಐವರು ಮುಸ್ಲಿಂ ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಮೂವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದು ಗಂಭೀರ ಗಾಯಗೊಂಡಿದ್ದ ಸಿದ್ದೀಕ್ ಮತ್ತು ಝಕರಿಯಾ ಎಂಬವರು ಮಂಗಳೂರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.