dtvkannada

ಕರಾವಳಿ ಮತ್ತೆ ಸುದ್ದಿಯಾಗುತ್ತಿದೆ. ತಲವಾರುಗಳು ಮತ್ತೆ ಮತ್ತೆ ಸದ್ದು ಮಾಡುತ್ತಿದೆ.
ಧರ್ಮಗಳ ಹೆಸರಿನಲ್ಲಿ ಅಧರ್ಮಗಳು ತಾಂಡವಾಡುತ್ತಿದೆ.


ಅಮಾಯಕ ಜೀವಗಳು ರಕ್ತದ ಮಡುವಿನಲ್ಲಿ ಆಸ್ಪತ್ರೆಯ ಬೆಡ್ ಗಳ ಮೇಲೆ ಮಲಗುವಂತಾಗಿದೆ.
ಬಡ ಜೀವಗಳನ್ನು ಬಲಿ ಪಡೆದು ರಾಜಕೀಯ ಲಾಭ ಪಡೆಯಲೆತ್ನಿಸುವವರು ಮತ್ತಷ್ಟು ಪ್ರಚೋದಿಸುತ್ತಲೇ ಇದ್ದಾರೆ.
ಅಮಾಯಕ ಜನರ ಹೆಣಗಳ ಮೇಲೆ ಅಧಿಕಾರದ ರುಚಿಯನ್ನು ಅನುಭವಿಸಿದವರು ಅವರ ತಲೆಮಾರುಗಳಿಗೆ ಬೇಕಾದಷ್ಟು ಆಸ್ತಿ , ಸಂಪತ್ತುಗಳನ್ನು ಕ್ರೋಢೀಕರಿಸಿಕೊಂಡಿಟ್ಟಿದ್ದರೆ, ಅವರಿಗಾಗಿ ಪ್ರಾಣ ತ್ಯಾಗ ನಡೆಸಿದ ಯುವಕರ ಮನೆಗಳು ಈಗಲೂ ಸ್ಮಶಾನ ಮೌನ ಆವರಿಸಿಯೇ ಇದೆ.

ಧರ್ಮದ ಅಫೀಮನ್ನು ತುಂಬಿಸಿ ಕೈಯಲ್ಲಿ ತಲವಾರನ್ನು ಹಿಡಿದು ಹೊರಟವರು ಕೇಸು, ಜೈಲು ಅಂತ ಸುತ್ತಾಡುತ್ತಲೇ ಇದ್ದಾರೆ.
ವಕೀಲರ ಫೀಸನ್ನು ಪಾವತಿಸಲಾಗದೆ ಅದೆಷ್ಟೋ ಹೆತ್ತವರು ಇರುವ ಸೂರನ್ನು ಮಾರಿ ಯಾತನಾಮಯ ಜೀವನ ನಡೆಸುತ್ತಿದ್ದಾರೆ.
ಕೊಂದವರೂ, ಕೊಲ್ಲಲ್ಪಟ್ಟವರ ಕುಟುಂಬಗಳು ಕತ್ತಲ ಕೋಣೆಯಲ್ಲಿ ಕಳೆಯುವಾಗ ಅವರ ಮೂಲಕ ರಾಜಕೀಯ ಲಾಭ ಪಡೆದವರು ಇನ್ನೊಂದು ಬಲಿಗಾಗಿ ಕಾಯುತ್ತಿದ್ದಾರೆ.
ಅದಕ್ಕಾಗಿ ಒಂದಷ್ಟು ಜನರ ತಲೆಗೆ ಕೋಮುವಾದದ ಅಮಲನ್ನು ತುಂಬಿಸಿಕೊಡುತ್ತಿದ್ದಾರೆ!

ಕಳೆದೆರಡು ತಿಂಗಳಲ್ಲಿ ಜಿಲ್ಲೆಯೊಂದರಲ್ಲೇ ನೂರಕ್ಕೆ ಸಮೀಪದ ಘಟನೆಗಳು ನಡೆದರೂ ಆರೋಪಿಗಳು ರಾಜಾರೋಷವಾಗಿ ಮೆರೆಯುತ್ತಿದ್ದಾರೆ.
ಕಾನೂನಿನ ಕುಣಿಕೆಯು ಅಸಹಾಯಕತೆಯಿಂದ ನೋಡುತ್ತಿದೆ.

ಕಾನೂನು ಪಾಲಕರೂ ಯಾರದೋ ಒತ್ತಡಕ್ಕೆ ಮಣಿದವರಂತೆ ಮೌನವಾಗಿದ್ದಾರೆ.
ಪರಿಣಾಮವಾಗಿ ಒಂದರ ಹಿಂದೆ ಮತ್ತೊಂದರಂತೆ ಕೋಮುವೈಷಮ್ಯದ ಪ್ರಕರಣಗಳು ಮರುಕಳಿಸುತ್ತಲೇ ಇದೆ!
ಭ್ರಾತೃತ್ವ ಮೂಡಿಸಬೇಕಾದ ಕಾಲೇಜ್ ಕ್ಯಾಂಪಸ್ ಗಳು ಕೋಮುವಾದದ ಪ್ರಯೋಗ ಶಾಲೆಯಾಗಿ ಪರಿವರ್ತನೆಗೊಳ್ಳಲ್ಪಡುತ್ತಿದೆ.

ಕೋಮು ಸಂಘರ್ಷಗಳಿಂದ ಗಳಿಸಿದಕ್ಕಿಂತಲೂ ಕಳೆದುಕೊಂಡ ಉದಾಹರಣೆಗಳು ನಮ್ಮ ಕಣ್ಣ ಮುಂದಿರುವಾಗ ಯಾರದೋ ಸ್ವಾರ್ಥ ಲಾಭಕ್ಕಾಗಿ ತಲವಾರುಗಳನ್ನು, ಆಯುಧಗಳನ್ನು ಕೈಯಲ್ಲಿಡಿದು ಯಾರದೋ ಅಮಾಯಕರ ವಿರುದ್ಧ ಪ್ರಯೋಗಿಸುವ ಮುನ್ನ ಕುಟುಂಬದ ಕುರಿತು ಸ್ವಲ್ಪ ಚಿಂತಿಸುವ ಪ್ರಯತ್ನವನ್ನಾದರೂ ನಡೆಸಿ.

ಈ ಕೋಮುವಾದ ಅಮಲಿನಿಂದಾಗಿ ಅದೆಷ್ಟೋ ದುಡಿದು ತಿನ್ನುವ ಕೈಗಳೂ ಇಂದು ಬೇಡಿ ತಿನ್ನುವಂತಾಗಿದೆ.
ಯಾರದೋ ಸ್ವಾರ್ಥಕ್ಕಾಗಿ ನಮ್ಮನ್ನು ಹರಕೆಯ ಕುರಿಗಳನ್ನಾಗಿಸುವ ಮುನ್ನ ನಾಳೆ ಅದೇ ಕೋಮುವಾದಕ್ಕೆ ನಾವು ಬಲಿಯಾದರೂ ಆ ಪಕ್ಷದ ಧ್ವಜವನ್ನು ಮೃತ ಶರೀರದ ಮೇಲೆ ಹೊದಿಸಿ ಒಂದಷ್ಟು ದಿನ ಅದನ್ನು ಸ್ಟೇಟಸ್ ಗಳನ್ನಾಗಿಸಿ ಅನುಕಂಪ ತೋರಬಹುದು.
ಮತ್ತೆ ನಮ್ಮ ನೆನಪಿನಲ್ಲಿ ಕೊರಗುತ್ತಾ ಜೀವನ ಸಾಗಿಸುವವರು ನಮ್ಮ ಮನೆಯವರು ಮಾತ್ರವಾಗಿರುತ್ತಾರೆ.

ಅದೆಷ್ಟೋ ಕೋಮುಗಲಭೆಗಳಿಗೆ ಈ ಜಿಲ್ಲೆ ಸಾಕ್ಷಿಯಾಗಿದೆ.
ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗಿದೆ.
ಬಲಿಯಾದ ಒಂದೊಂದು ಯುವಕರ ಮನೆಯೂ ಒಂದೊಂದು ಕಣ್ಣೀರ ಕಥೆಗಳನ್ನು ನಮಗೆ ಪರಿಚಯಿಸಿಕೊಡುತ್ತದೆ.
ಆವೇಶ, ಆಕ್ರೋಶಗಳನ್ನು ಮನದೊಳಗೆ ತುರುಕಿಸಿ ಧರ್ಮಗಳ ನಡುವೆ ಕಂದಕವನ್ನುಂಟು ಮಾಡುವ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಸೌಹಾರ್ದ ಸಮಾಜವೊಂದರ ಸೃಷ್ಟಿಗೆ ಕಾರಣರಾಗೋಣ.

By dtv

Leave a Reply

Your email address will not be published. Required fields are marked *

error: Content is protected !!