dtvkannada

ಆಸ್ತಿ, ದುಡ್ಡಿಗಾಗಿ ದಾಯಾದಿಗಳ ಮಧ್ಯೆ ಹೊಡೆದಾಟ, ಕೊಲೆಯಂಥ ಕೃತ್ಯಗಳು ನಡೆಯುತ್ತಿರುತ್ತವೆ. ಹೆಚ್ಚಾಗಿ ಇಂಥದ್ದನ್ನೆಲ್ಲ ಮಾಡಿ ಸಿಕ್ಕಿಬೀಳುವವರು ಪುರುಷರು. ಆದರೆ ತೆಲಂಗಾಣದ ಮೇದಕ್ ಜಿಲ್ಲೆಯ ವಾಡಿಯಾರಾಮ್ ಗ್ರಾಮದಲ್ಲಿ ಮಹಿಳೆಯೊಬ್ಬಳು ಇಂಥ ದುಷ್ಕೃತ್ಯ ನಡೆಸಿದ್ದಾರೆ. ರಾಜೇಶ್ವರಿ ಎಂಬಾಕೆ ಆಸ್ತಿಗಾಗಿ ತನ್ನ ಸಹೋದರಿಗೇ ಬೆಂಕಿ ಹಚ್ಚಿ ಕೊಂದಿದ್ದಾಳೆ.
ಮೃತ ಮಹಿಳೆಯನ್ನು ವರಲಕ್ಷ್ಮೀ (36) ಎಂದು ತಿಳಿದು ಬಂದಿದೆ

ವರಲಕ್ಷ್ಮೀ ಎಂಬಾಕೆ ವಾಡಿಯಾರಾಮ್​ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಆಕೆಯ ಪತಿ ಕೆಲವು ವರ್ಷಗಳ ಹಿಂದೆಯೇ ದೂರಾವಾಗಿದ್ದಾರೆ. ಈಕೆಗೆ ರಾಜೇಶ್ವರಿ ಎಂಬ ತಂಗಿ ಇದ್ದು, ಅವಳೂ ವಿಚ್ಛೇದಿತಳು.  ಇವರಿಬ್ಬರೂ ಸ್ವಂತ ಅಕ್ಕ-ತಂಗಿಯರಾಗಿದ್ದು, ಕಾಮರೆಡ್ಡಿ ಜಿಲ್ಲೆಯಲ್ಲಿ ತವರು ಮನೆಯಿದೆ. ಈ ಸಹೋದರಿಯರ ಪಾಲಕರ ಬಳಿ 5 ಎಕರೆಗಳಷ್ಟು ಭೂಮಿಯಿದೆ. ಆ ಐದು ಎಕರೆ ಭೂಮಿ ಹಂಚಿಕೊಳ್ಳುವ ಸಂಬಂಧ ವರಲಕ್ಷ್ಮೀ ಮತ್ತು ರಾಜೇಶ್ವರಿ ಮಧ್ಯೆ ವಿದಾದ ಇತ್ತು ಎಂದು ಚೆಗುಂಟಾ ಪೊಲೀಸರು ತಿಳಿಸಿದ್ದಾರೆ. ​

ಸೋಮವಾರ ಸಂಜೆ ರಾಜೇಶ್ವರಿ ತನ್ನ ಸೋದರಿ ವರಲಕ್ಷ್ಮೀ ಮನೆಗೆ ಬಂದಿದ್ದಾಳೆ. ಜಮೀನು ವಿಚಾರ ಚರ್ಚಿಸುವ ಸಲುವಾಗಿಯೇ ಬಂದಿದ್ದರೂ, ಮಾತುಕತೆಯೆಂಬುದು ಬರುಬರುತ್ತ ಜಗಳಕ್ಕೆ ತಿರುಗಿದೆ. ಈ ರಾಜೇಶ್ವರಿಯಂತೂ ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದೇ ಬಂದಿದ್ದಳು. ಇಬ್ಬರೂ ಜಗಳವಾಡಿಕೊಂಡ ಬಳಿಕ ರಾಜೇಶ್ವರಿ ತನ್ನ ಅಕ್ಕನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ತೀವ್ರವಾಗಿ ಗಾಯಗೊಂಡ ವರಲಕ್ಷ್ಮಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಅವರು ಬದುಕುಳಿಯಲಿಲ್ಲ ಎಂದೂ ಪೊಲಿಸರು ಮಾಹಿತಿ ನೀಡಿದ್ದಾರೆ. ಇತ್ತ ರಾಜೇಶ್ವರಿ ಕೂಡ ಸುಟ್ಟುಕೊಂಡಿದ್ದಾರೆ. ಶೇ.80ರಷ್ಟು ಸುಟ್ಟುಕೊಂಡಿರುವ ಈಕೆ ಕೂಡ ಬದುಕುವ ಸಾಧ್ಯತೆ ಕಡಿಮೆಯೇ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!