dtvkannada

ಬೆಳ್ತಂಗಡಿ: ಮದ್ರಸಾದಲ್ಲಿ ಮಕ್ಕಳಿಗೆ ವಿದ್ಯೆ ಕಲಿಸುತ್ತಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಮದರಸ ಶಿಕ್ಷಕನ‌ ಮೇಲೆ ಪೋಕ್ಸೋ ಪ್ರಕರಣ ದಾಖಲಾದ ಘಟನೆ ಬೆಳ್ತಂಗಡಿಯ ಪುತ್ತಿಲದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕುಂಡಡ್ಕ ಸಂಶುಲ್ ಹುದಾ ಮದರಸ ಶಾಲೆಯ ಶಿಕ್ಷಕ(ಉಸ್ತಾದ್) ಸಿರಾಜುದ್ದೀನ್ ಮದನಿ ಎಂಬಾತನನ್ನು ಪುತ್ತೂರು ಮಹಿಳಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪುತ್ತಿಲ ಗ್ರಾಮದ ಕುಂಡಡ್ಕದ ಸಂಶುಲ್ ಹುದಾ ಮದ್ರಸಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಮಕ್ಕಳಿಬ್ಬರು ಮನೆಗೆ ಬಂದು ತಮ್ಮ ಮೇಲೆ ಉಸ್ತಾದ್ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಬಗ್ಗೆ ತಾಯಿಗೆ ತಿಳಿಸಿದ್ದರು. ಈ ನಿಟ್ಟಿನಲ್ಲಿ ಹೆಣ್ಮಕ್ಕಳ ತಾಯಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಹೆಣ್ಣು ಮಕ್ಕಳು ಧರಿಸಿದ್ದ ಬಟ್ಟೆ ಸರಿಸಿ ಮೈ ಮುಟ್ಟಿ ದೇಹವೆಲ್ಲ ಸವರಿದ್ದಲ್ಲದೇ ಅಪ್ಪಿ ಹಿಡಿದಿರುವುದಾಗಿಯೂ, ಏನಾದರೂ ಕಾರಣ ಹೇಳಿ ಉಸ್ತಾದ್ ತನ್ನ ರೂಮಿಗೆ ಹೆಣ್ಮಕ್ಕಳನ್ನು ಕರೆಸಿಕೊಂಡು ಜನನಾಂಗವನ್ನು ಮುಟ್ಟುತ್ತಿದ್ದರು ಎಂದೂ ಕಳೆದ ಒಂದು ವರ್ಷದಿಂದ ಈ ರೀತಿ ಅಸಭ್ಯವಾಗಿ ಉಸ್ತಾದ್ ಸಿರಾಜುದ್ದೀನ್ ಮದನಿ ವರ್ತಿಸಿರುವುದಾಗಿಯೂ ಹೆಣ್ಣು ಮಕ್ಕಳು ತಿಳಿಸಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು.

ಮೂಲತಃ ಉರುವಾಲುಪದವು ನಿವಾಸಿಯಾಗಿರುವ ಉಸ್ತಾದ್ ಸಿರಾಜುದ್ದೀನ್ ಮದನಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಇನ್ಸ್‌ಪೆಕ್ಟರ್ ಎಂ.ಎನ್. ರಾವ್ ಮತ್ತು ಎಸ್.ಐ. ಸೇಸಮ್ಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ

By dtv

Leave a Reply

Your email address will not be published. Required fields are marked *

error: Content is protected !!