ಉಪ್ಪಿನಂಗಡಿ: ಸೂರಬೈಲಿನ ಶಾಂತರಾಂ ಭಟ್ ಅವರ ಮನೆ ಪಕ್ಕದಲ್ಲಿದ್ದ ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸುವ ಯಂತ್ರವಿರುವ ಕಟ್ಟಡವು ಬೆಂಕಿಯಾಹುತಿಯಾಗಿದ್ದು ಕಟ್ಟಡ ಮತ್ತು ದಾಸ್ತಾನು ಇರಿಸಿದ್ದ ಕೃಷಿ ಸಾಮಾಗ್ರಿಗಳು ಸಂಪೂರ್ಣ ಹೊತ್ತಿ ಬೂದಿಯಾಗಿದೆ.

ಈ ಕಟ್ಟಡದಲ್ಲಿ ನಿನ್ನೆ ಸಂಜೆವರೆಗೂ ಕೆಲಸ ಮಾಡಲಾಗಿದ್ದು ಅದರಿಂದ ಹಾರಿರಬಹುದಾದ ಕಿಡಿ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿರಬಹುದೆಂದು ಸಂಶಯಿಸಲಾಗಿದೆ.
ಕಟ್ಟಡದ ಒಳಗೆ ಅಡಿಕೆ, ತೆಂಗಿನ ಕಾಯಿಗಳು ಸಂಗ್ರಹಿಸಿಟ್ಟಿದ್ದು ಇದೀಗ ಆಕಸ್ಮಿಕವಾಗಿ ಉಂಟಾದ ಬೆಂಕಿಗೆ ಇದೆಲ್ಲವೂ ಹೊತ್ತಿ ಉರಿದು ಅಪಾರ ನಷ್ಟ ಸಂಭವಿಸಿದೆಯೆಂದು ತಿಳಿದು ಬಂದಿದೆ.

ಇಂದು ಬೆಳಗಿನ ಜಾವದಷ್ಟರಲ್ಲಿ ಬೆಂಕಿಯ ಕೆನ್ನಾಲಯು ಮುಗಿಲೆತ್ತರಕ್ಕೆ ಚಾಚಿದ್ದು, ಸಕಾಲದಲ್ಲಿ ಆಗಮಿಸಿದ ಪುತ್ತೂರು ಅಗ್ನಿಶಾಮಕ ದಳದವರು ಬೆಂಕಿ ಆರಿಸುವಲ್ಲಿ ಯಶಸ್ವಿ ಆದರಾದರೂ ಅಷ್ಟರಲ್ಲೇ ಬೆಂಕಿ ತನ್ನ ಕೆಲಸ ಮುಗಿಸಿತ್ತೆಂದು ತಿಳಿದು ಬಂದಿದೆ.
