ಚಿಕ್ಕಬಳ್ಳಾಪುರ: ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯತೆಯಿಂದ ತಾಯಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತಳ ಕುಟುಂಬಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆ ಎದುರು ನಡೆದಿದೆ.
ತಾಲೂಕಿನ ಬೈರಾಪುರ ಗ್ರಾಮದ ಸವಿತಾ(22) ಮೃತ ಮಹಿಳೆ. ಹೆರಿಗೆಗಾಗಿ ತಾಯಿ, ಮಗು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಆಧಿಕ ರಕ್ತಸ್ರಾವದಿಂದ ಹೆರಿಗೆಯಾದ ಕ್ಷಣದಲ್ಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಮೃತಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಹೊಟ್ಟೆಯಲ್ಲಿದ್ದ ಮಗು 4 ಕೆ.ಜಿ. ತೂಕ ಇದ್ದು ಹೆರಿಗೆ ಮಾಡಿಸುವುದು ಸವಾಲಿನ ಕೆಲಸವಾಗಿತ್ತು.
ಇದೀಗ ತಾಯಿ ಕಳೆದುಕೊಂಡು ನವಜಾತ ಶಿಶು ಅನಾಥವಾಗಿದೆ. ಇದರಿಂದ ಸಿಟ್ಟಿಗೆದ್ದ ಕುಟುಂಬದವರು ವೈದ್ಯರ ವಿರುದ್ಧ ಸರ್ಕಾರಿ ತಾಯಿ ಮಗು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ಆಕ್ರೋಶಗೊಂಡ ಮೃತಪಟ್ಟ ಮಹಿಳೆಯ ಗಂಡ ರಮೇಶ್ “ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರೆ, ನಾವು ಕರೆದುಕೊಂಡು ಹೋಗುತ್ತಿದ್ದೆವು. ಆದರೆ ವೈದ್ಯರು ಇಲ್ಲಿಯೇ ಹೆರಿಗೆ ಮಾಡುವುದಾಗಿ ಧೈರ್ಯ ಹೇಳಿ ಕೊನೆಗೆ ಜೀವವನ್ನು ತೆಗೆದಿದ್ದಾರೆ. ಹುಟ್ಟಿದ ಕ್ಷಣದಲ್ಲಿ ಮಗುವಿಗೆ ತಾಯಿ ಇಲ್ಲದಂತೆ ಮಾಡಿದ್ದಾರೆ” ಎಂದು ಮೃತಳ ಗಂಡ ಆರೋಪಿಸಿದ್ದಾರೆ