ಕೊಣಾಜೆ: ಬೋಳಿಯಾರ್ ಗ್ರಾಮದ ಕಾಪಿಕಾಡು ಎಂಬಲ್ಲಿ ವಾಸ್ತವ್ಯ ಹೂಡಿದ್ದ ಹೈದರ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ (16) ನಾಪತ್ತೆಯಾಗಿದ್ದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಈತ ಮುಡಿಪುವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ ಏಕಾಏಕಿ ಅಬ್ದುಲ್ ರಹಿಮಾನ್ ಕಾಣೆಯಾಗಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಈತ ಬುಧವಾರ ಸಂಜೆ 5.30 ರ ನಂತರ ಕಾಣೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೂರು ದಿನವಾದರೂ ಮನೆಗೆ ಬಾರದ ಮಗನನ್ನು ನೆನೆದು ಪೋಷಕರು ಆತಂಕಕ್ಕೀಡಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನಿನ್ನೆ ಸಂಜೆ ಮುಡಿಪು ಭಾಗದ ಝಾಕಿರ್ ಹುಸೇನ್ ಎಂಬ ಬಾಲಕ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದ. ಕೊನೆಗೆ ರಾತ್ರಿ ಹೊತ್ತು ಮಡವೂರು ರೈಲ್ವೇ ಸ್ಟೇಶನ್’ನಲ್ಲಿ ಪತ್ತೆಯಾಗಿದ್ದ. ಮೊಬೈಲ್ ಮಾರಿ ಸಿಕ್ಕಿದ ದುಡ್ಡಿನಲ್ಲಿ ರೈಲು ಹತ್ತಿ ಹೊರಟಿದ್ದ.