dtvkannada

ತುಮಕೂರು: ಖಾಸಗಿ ಬಸ್ ಒಂದು ಪಲ್ಟಿ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ಪಾವಗಡದಲ್ಲಿ ಇಂದು ನಡೆದಿದೆ.

ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬಸ್ಸಿನಲ್ಲಿದ್ದ 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀನಿವಾಸ್ ಮೂರ್ತಿ ಒಡೆತನದ ಎಸ್‌ವಿಟಿ ಬಸ್ ಪಲ್ಟಿ ಆಗಿದೆ. ಪ್ರತಿ ದಿನ ಪಾವಗಡ- ವೈ.ಎನ್. ಕೋಟೆ ಮಧ್ಯೆ ಈ ಬಸ್ ಸಂಚರಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ಪಳವಳ್ಳಿಯ ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಅಪಘಾತ ಸಂಭವಿಸಿದ ಪಳವಳ್ಳಿ ಕಟ್ಟೆ ಬಳಿ ಜನರ ಜಮಾವಣೆ ಆಗಿದೆ. ಅಪಘಾತ ನೋಡಲು ನೂರಾರು ಜನರು ಗುಂಪುಗೂಡಿದ್ದಾರೆ. ಸ್ಥಳದಲ್ಲಿ ಗುಂಪುಗೂಡಿದ್ದ ಜನರನ್ನು ಪೊಲೀಸರು ಚದುರಿಸಿದ್ದಾರೆ. ಗಾಯಾಳುಗಳಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೆಲ ಗಾಯಾಳುಗಳು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಚಾಲಕ ಅತಿ ವೇಗವಾಗಿ ಖಾಸಗಿ ಬಸ್ ಚಲಾಯಿಸುತ್ತಿದ್ದ. ಹೀಗಾಗಿ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದೆ. ನಮ್ಮ ಮಾರ್ಗದಲ್ಲಿ ಎಲ್ಲಾ ಬಸ್ ವೇಗವಾಗಿ ಓಡಿಸ್ತಾರೆ. ಇವರಿಗೆ ಯಾರೂ ಹೇಳೋರು ಕೇಳೋರೇ ಇಲ್ಲ ಎಂದು ಪ್ರತ್ಯಕ್ಷದರ್ಶಿ ಪ್ರಸಾದ್ ಹೇಳಿದ್ದಾರೆ. ಬೆಳಗ್ಗೆ 9.20ರ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದೆ. ಬೆಳಗ್ಗೆ 8.30 ಕ್ಕೆ ವೈ.ಎನ್. ಹೊಸಕೋಟೆಯಿಂದ ಹೊರಟಿತ್ತು. ವೈ.ಎನ್. ಹೊಸಕೋಟೆ, ಪಾವಗಡದ ಮಧ್ಯೆ ಬಸ್ ಸಂಚಾರ ನಡೆಸುತ್ತಿತ್ತು ಎಂದು ತಿಳಿದುಬಂದಿದೆ.

ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ದೊರಕಿಸಲು ನಿರ್ದೇಶಿಸಿದ್ದೇನೆ: ಆರಗ ಜ್ಞಾನೇಂದ್ರ
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿಕಟ್ಟೆ ಗ್ರಾಮದಲ್ಲಿ ನಡೆದ ಭೀಕರ ಬಸ್ ಅಪಘಾತದ ಸುದ್ದಿ ತಿಳಿದು ಆಘಾತವಾಗಿದೆ. ಅಪಘಾತದಲ್ಲಿ ಎಂಟು ಮಂದಿ ಪ್ರಯಾಣಿಕರು ಮರಣ ಹೊಂದಿದ್ದು, ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಸಿಬ್ಬಂದಿ, ದುರಂತ ಸ್ಥಳಕ್ಕೆ ತಕ್ಷಣ ಧಾವಿಸಿ ಎಲ್ಲಾ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ದೊರಕಿಸಲು ನಿರ್ದೇಶಿಸಿದ್ದೇನೆ. ಜಿಲ್ಲಾ ಎಸ್ಪಿ ಸ್ಥಳಕ್ಕೆ ತೆರಳಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಜವಾಬ್ದಾರಿ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

By dtv

2 thoughts on “ಖಾಸಗಿ ಬಸ್ ಭೀಕರ ಅಪಘಾತ; 8 ಮಂದಿ ಸಾವು, 20ಕ್ಕೂ ಅಧಿಕ ಮಂದಿ ಗಂಭೀರ”

Leave a Reply

Your email address will not be published. Required fields are marked *

error: Content is protected !!