dtvkannada

ಶಿವಮೊಗ್ಗ: ಅವರದ್ದು ಕಳೆದ ನಾಲ್ಕೈದು ವರ್ಷಗಳ ಪ್ರೇಮ್‍ಕಹಾನಿ. ಜಾತಿ ಬೇರೆಯದ್ದಾದರೂ ಪ್ರೀತಿಗೇನೂ ಕೊರತೆಯಿರಲಿಲ್ಲ. ವೃತ್ತಿಯಲ್ಲೂ ಸಮಾನತೆ ಕಾಯ್ದುಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಬ್ಬರ ವಿವಾಹವಾಗಿ ಯುವತಿ, ಪಿಎಚ್‍ಡಿ ಪದವೀಧರೆಯೂ ಆಗಿರುತ್ತಿದ್ದಳು. ಆದರೆ, ಪ್ರೀತಿಸಿದ ಯುವಕ ಕೈಕೊಟ್ಟ ವಿಷಯ ತಿಳಿದ ಯುವತಿ ಅವನ ಮದುವೆ ದಿನದಂದೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೌದು. ಪ್ರೀತಿಸಿದ ಯುವಕ ಕೈಕೊಟ್ಟಕಾರಣದಿಂದ ಮನನೊಂದ ಯುವತಿ ಪ್ರಿಯಕರನ ಮದುವೆ ದಿನದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ರೂಪ (28) ಎಂಬವರೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಏನಿದು ಕಹಾನಿ?
ಶಿವಮೊಗ್ಗದವರೇ ಆಗಿದ್ದ ರೂಪಾ ಹಾಗೂ ಮುರಳಿ ಕಳೆದ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಜಾತಿಯಲ್ಲಿ ಇಬ್ಬರು ಬೇರೆಯಾದರೂ ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದರು. ಮುರಳಿ ಡಿವಿಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ರೂಪಾ ಸಹ್ಯಾದ್ರಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿದ್ದರು. ಇದರೊಂದಿಗೆ ಪಿಎಚ್.ಡಿ ಯನ್ನು ಮಾಡುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇನ್ನೆರಡು ತಿಂಗಳಿನಲ್ಲಿ ಪಿಎಚ್‍ಡಿ ಪದವಿಧರೆಯಾಗುತ್ತಿದ್ದರು. ಅಷ್ಟರಲ್ಲೇ ಪ್ರೀತಿಯಲ್ಲಿ ಬಿದ್ದು ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ. ಇದರಿಂದ ಪಿಎಚ್‍ಡಿ ಡಾಕ್ಟರೇಟ್ ಪಡೆಯುವ ಕನಸೂ ನುಚ್ಚುನೂರಾಗಿದೆ.

ಹಿಂದೊಮ್ಮೆ ವಿಷ ಸೇವಿಸಿದ್ದ ರೂಪ:
ಹಿಂದೆಯೇ ರೂಪಾಳಿಗೆ ಮದುವೆ ಮಾಡಲು ಪೋಷಕರು ಗಂಡು ಹುಡುಕಲು ಪ್ರಾರಂಭಿಸಿದ್ದರು. ಅಲ್ಲದೇ, ಸಾಕಷ್ಟು ಕಡೆಯಿಂದಲೂ ಸಂಬಂಧಗಳು ಬಂದಿದ್ದವು. ಆದರೆ ರೂಪ ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಪಿಎಚ್‍ಡಿ ಮುಗಿದ ಬಳಿಕ ಪ್ರೀತಿಯ ವಿಷಯವನ್ನು ಮನೆಯವರಿಗೆ ತಿಳಿಸಿ, ಮದುವೆಯಾಗೋಣವೆಂದು ಮುಂದೂಡುತ್ತಾ ಬಂದಿದ್ದರು. 2 ತಿಂಗಳ ಹಿಂದೆ ಮಗಳ ಪ್ರೀತಿ ವಿಷಯ ಮನೆಯಲ್ಲಿ ಗೊತ್ತಾಗಿ ಗಲಾಟೆಯೂ ನಡೆದಿತ್ತು. ಇದರಿಂದ ಮನನೊಂದಿದ್ದ ರೂಪಾ ಫೆಬ್ರವರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದಳು. ನಂತರ ಚಿಕಿತ್ಸೆ ಪಡೆದು ಆರೋಗ್ಯವಾದರು ಎಂದು ರೂಪಾಳ ಸೋದರಮಾವ ರಾಘವೇಂದ್ರ ಹಾಗೂ ಸಹೋದರ ರಾಕೇಶ್ ಮಾಹಿತಿ ನೀಡಿದ್ದಾರೆ.

ನಂತರ ರೂಪಾ ಪೋಷಕರೇ ಜಾತಿ ಬೇರೆಯಾಗಿದ್ದರೂ ಪರವಾಗಿಲ್ಲ. ಮಗಳು ಚೆನ್ನಾಗಿದ್ದರೆ ಸಾಕು ಎಂದು ಮುರಳಿ ಜೊತೆ ವಿವಾಹ ಮಾಡಲು ನಿರ್ಧರಿಸಿದ್ದರು. ಆದರೆ ಮುರಳಿ ರೂಪಾಳಿಗೆ ಕೈಕೊಟ್ಟು ಇಂದು (ಭಾನುವಾರ) ಶಿವಮೊಗ್ಗದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಪಲ್ಲವಿ ಎಂಬ ಯುವತಿಯೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಇದರಿಂದ ಮನನೊಂದ ರೂಪ ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ರೂಪ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ ಪಲ್ಲವಿಗೆ ತಾಳಿ ಕಟ್ಟುತ್ತಿದ್ದಂತೆ ಮುರಳಿ ಕಲ್ಯಾಣ ಮಂಟಪದಿಂದಲೇ ಪರಾರಿಯಾಗಿದ್ದಾನೆ. ಘಟನೆ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುರಳಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!