dtvkannada

ಪುತ್ತೂರು.(ಜೂನ್.3): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಈಡಿಯ ದಮನಕಾರಿ ನೀತಿಯನ್ನು ಖಂಡಿಸಿ ಪಿಎಫ್ಐ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಎ.ಸಿ ಕಛೇರಿ ಮುಂಭಾಗದ ಅಮರ್ ಜವಾನ್ ಚೌಕಿಯಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಿಎಫ್ಐ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬಿರ್ ಅರಿಯಡ್ಕ ಈಡಿ ಸಂಸ್ಥೆಯು ಬಿಜೆಪಿಯ ಟೂಲ್ ಕಿಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಘಪರಿವಾರದ ವಿರುದ್ಧ ಧ್ವನಿ ಎತ್ತುವ ಕಾರಣಕ್ಕಾಗಿ ಇಂತಹ ದಾಳಿಗಳು ನಡೆಯುತ್ತಿದೆ.
ಪಿಎಫ್ಐ ಎಂದರೆ ಅದೊಂದು ಸಂಘಟನೆ ಅಲ್ಲ, ಬದಲಾಗಿ ಇದೊಂದು ಚಿಂತನೆಯಾಗಿದೆ. ಆ ಚಿಂತನೆಯನ್ನು ಮನಸ್ಸಿನಿಂದ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ.
ನಮ್ಮಿಂದ ಮುಟ್ಟುಗೋಲು ಹಾಕಿದ ಹಣವನ್ನು ಶೀಘ್ರದಲ್ಲಿಯೇ ಕಾನೂನು ಬದ್ಧವಾಗಿ ಮರಳಿ ಪಡೆಯಲಿದ್ದೇವೆ ಎಂದು ಹೇಳಿದರು.

ಜಿಲ್ಲಾ ಸಮಿತಿ ಸದಸ್ಯರಾದ ರಿಯಾಝ್ ಬಳಕ್ಕ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಈಡಿ ದಾಳಿ ಇದು ಪಿಎಫ್ಐಗೆ ಹೊಸತೇನಲ್ಲ, ಈ ಹಿಂದೆಯೂ ಕೂಡ ಇಂತಹ ಆರೋಪ ಹೊರಿಸಿತ್ತು. ಜನವಿರೋಧಿ ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆ ಈಡಿ ಎಂಬ ಅಸ್ತ್ರವನ್ನು ಬಳಸಿಕೊಂಡು ತಮ್ಮ ಧ್ವನಿಯನ್ನು ಅಡಗಿಸುವ ಕೆಲಸಮಾಡುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ದಮನಕಾರಿ ದಾಳಿಗಳಿಗೆ ಪಿಎಫ್ಐ ಹೆದರೋದಿಲ್ಲ, ಮುಂದಿನ ದಿನಗಳಲ್ಲಿ ಕಾನೂನಿನ ಮೂಲಕ ಉತ್ತರ ಕೊಡಲಿದ್ದೇವೆ ಎಂದರು

ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಸಿಟಿ ಡಿವಿಝನ್ ಅಧ್ಯಕ್ಷರಾದ ಉಮ್ಮರ್ ಕೂರ್ನಡ್ಕ, ಕಬಕ ಡಿವಿಝನ್ ಅಧ್ಯಕ್ಷರಾದ ಶಮೀರ್ ಮುರ, ಕುಂಬ್ರ ಡಿವಿಝನ್ ಅಧ್ಯಕ್ಷರಾದ ಶಾಕಿರ್ ಕಟ್ಟತ್ತಾರ್, ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಅದ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಮೊದಲಾದವರು ಉಪಸ್ಥಿತರಿದ್ದರು. ಇಕ್ಬಾಲ್ ಮುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

By dtv

Leave a Reply

Your email address will not be published. Required fields are marked *

error: Content is protected !!