ಮಂಗಳೂರು: ಇಂಟರ್ ನ್ಯಾಷನಲ್ ಬೈಕ್ ರೈಡರ್, ಮಂಗಳೂರು ಬುಲ್ಸ್ ಕ್ಲಬ್ ಸದಸ್ಯ, ಬೈಕ್’ನಲ್ಲೇ 3 ದೇಶ ಸುತ್ತಿದ್ದ ಮಂಗಳೂರಿನ ಯುವಕ ಸಯ್ಯದ್ ಮುಹಮ್ಮದ್ ಸಲೀಂ ಇಂದು ಅನಾರೋಗ್ಯದಿಂದ ತೊಕ್ಕೊಟ್ಟು ಖಾಸಗೀ ಆಸ್ಪತ್ರೆಯಲ್ಲಿ ನಿಧನರಾದರು.
ಮಂಗಳೂರಿನ ಉಳ್ಳಾಲ ಅರೇಕಳದ ಜಾರ ಹೌಸ್ ನಿವಾಸಿ ಸೈಯದ್ ಕುಟುಂಬದ ಕುಡಿ ಮುಹಮ್ಮದ್ ಸಲೀಂ ತಂಙಳ್ (31) ಮೃತಪಟ್ಟ ಯುವಕ.
ಕಳೆದ ಕೆಲವು ತಿಂಗಳಿನಿಂದ ಮಾರಕ ರೋಗಕ್ಕೆ ತುತ್ತಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮದ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ತಮ್ಮ ಬುಲೆಟ್ ಬೈಕ್’ನಲ್ಲಿ ರಸ್ತೆ ಸುರಕ್ಷತಾ ಜಾಗೃತಿಯ ಉದ್ದೇಶದಿಂದ ದೇಶದ ಮೂಲೆ ಮೂಲೆಗೂ ಸಂಚರಿಸಿದ್ದ ಸಲೀಂ, ಬಾಂಗ್ಲಾದೇಶ, ನೇಪಾಳ, ಭೂತಾನ್’ಗೂ ಏಕಾಂಗಿಯಾಗಿ ಬೈಕ್ ಮೂಲಕವೇ ಸಂಚರಿಸಿ ಎಲ್ಲರ ಗಮನ ಸೆಳೆದಿದ್ದರು.