ಮುಲ್ಕಿ: ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಿ ಸ್ಥಳ ಮಹಜರುಗೆ ತೆರಳುತ್ತಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಆರೋಪಿಗಳ ಮೇಲೆ ಇನ್ಸ್ಪೆಕ್ಟರ್ ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸಿದ ಘಟನೆ ಮೂಲ್ಕಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಆರೋಪಿಗಳು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ.
ಅರ್ಜುನ್ ಮೂಡುಶೆಡ್ಡೆ, ಮನೋಜ್ ಅಲಿಯಾಸ್ ಬಿಂದಾಸ್ ಮನೋಜ್ ಬಂಧಿತ ಆರೋಪಿಗಳು.
ಕೆಲ ದಿನಗಳ ಹಿಂದೆ ಬೈಕಂಪಾಡಿಯಲ್ಲಿ ಹತ್ಯೆಗೀಡಾದ ರೌಡಿಶೀಟರ್ ರಾಜಾ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇನ್ನಷ್ಟು ಆರೋಪಿಗಳ ಬಂಧನಕ್ಕಾಗಿ ಕರೆದೊಯ್ಯುತ್ತಿದ್ದ ವೇಳೆ ಜೊತೆಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಕಾರಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು.
ಈ ವೇಳೆ ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮೂರು ಸುತ್ತು ಗಾಳಿಯಲ್ಲಿ ಫೈರಿಂಗ್ ನಡೆಸಿದ್ದು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ.
ಘಟನೆಯಲ್ಲಿ ಪಿಎಸ್ಐ ನಾಗೇಂದ್ರ, ಎಎಸ್ಐ ಡೇವಿಡ್, ಎಎಚ್ಸಿ ಸುಧೀರ್ ಪೂಜಾರಿ ಮೇಲೆ ಕೂಡಾ ಹಲ್ಲೆ ನಡೆದಿದೆ.
ಗಾಯಗೊಂಡಿರುವ ಆರೋಪಿಗಳು ಹಾಗೂ ಪೊಲೀಸರನ್ನು ನಗರದ ಮುಕ್ಕದಲ್ಲಿರುವ ಶ್ರೀನಿವಾಸ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ:
ರೌಡಿಶೀಟರ್ ರಾಜಾ ಯಾನೆ ರಾಘವೇಂದ್ರ ಕಳೆದ ಸೋಮವಾರ ರಾತ್ರಿ 7.30ರ ಸುಮಾರಿಗೆ ಬೈಕಂಪಾಡಿ ಸುಪ್ರಿಯಾ ಬಾರ್ ಬಳಿಯಿಂದ ಮೀನಕಳಿಯ ರಸ್ತೆಯಾಗಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ, ಮಾರಣಾಂತಿಕವಾಗಿ ದಾಳಿ ನಡೆಸಿದ್ದರು.
ರಾಜಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿ ಬಿದ್ದಿದ್ದು, ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ್ದ ಪೊಲೀಸರು ರಾಜಾನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಸ್ಪತ್ರೆಯಲ್ಲಿ ರಾಜಾ ಮೃತಪಟ್ಟಿದ್ದ.