dtvkannada

ಪುತ್ತೂರು(ಜೂ.10): ಪ್ರವಾದಿ ಮುಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿ.ಜೆ.ಪಿ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮ ಹಾಗೂ ನವೀನ್ ಜಿಂದಾಲ್ ರನ್ನು ಶೀಘ್ರ ಬಂಧನಕ್ಕೆ ಒತ್ತಾಯಿಸಿ ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ‌ ಎ.ಸಿ ಕಛೇರಿ ಮುಂಭಾಗದ ಅಮರ್ ಜವಾನ್ ಚೌಕಿಯಲ್ಲಿ ಪ್ರತಿಭಟನೆ ನಡೆಯಿತು.

ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಮಾತನಾಡಿ, ದೇಶದಾದ್ಯಂತ ಬಿಜೆಪಿಯ ಮುಸ್ಲಿಂ ವಿರೋಧಿ ನೀತಿಯ ಭಾಗವಾಗಿ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವಹೇಳನ ಮಾಡಿದ್ದು ಒಬ್ಬ ವ್ಯಕ್ತಿಯನ್ನಲ್ಲ, ಬದಲಾಗಿ ವಿಶ್ವ ಮುಸ್ಲಿಂ ಬಾಂಧವರು ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಪೈಗಂಬರ್ ರವರ ಬಗ್ಗೆಯಾಗಿದೆ,ಇದರಿಂದ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗಿದೆ. ಆದುದರಿಂದ ಕೇವಲ ಎಫ್.ಐ.ಆರ್ ದಾಖಲಿಸಿದರೆ ಸಾಲದು, ಅವಹೇಳನ ಮಾಡಿದ ಇಬ್ಬರೂ ವಕ್ತಾರರನ್ನೂ ಬಂಧಿಸಬೇಕು. ಇದಕ್ಕಾಗಿ ಎಸ್‌ಡಿಪಿಐ ನಿರಂತರ ಹೋರಾಟ ನಡೆಸಲಿದೆ ಎಂದರು.

ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮಾತನಾಡಿ ಪ್ರವಾದಿಯವರನ್ನು ಅವಹೇಳನ ಮಾಡಿದ ಬಿಜೆಪಿ ನಾಯಕರ ಬಗ್ಗೆ ತುಟಿ ಬಿಚ್ಚದ ಬಿಜೆಪಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾದಿ ಅವಹೇಳನವನ್ನು ಕಟುವಾಗಿ ವಿರೋಧಿಸಿದ ಪರಿಣಾಮವಾಗಿ ಬಿಜೆಪಿ ವಕ್ತಾರರನ್ನು ಅಮಾನತುಗೊಳಿಸಲಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಮಾಡಿದ ಸರ್ಕಾರ ಎಂಬ ಖ್ಯಾತಿಗೆ ಬಿಜೆಪಿ ಸೇರಿತು. ಇದೆಲ್ಲದರ ಹಿಂದೆ ಸಂಘಪರಿವಾರದ ಫ್ಯಾಶಿಸಂ ಅಜೆಂಡಾಗಳೇ ಕಾರಣವಾಗಿದೆ. ಇದು ದೇಶದ ಆರ್ಥಿಕ ವ್ಯವಸ್ಥೆಯ ನಾಶವಾಗಲು ಕಾರಣವಾಗಿದೆ ಎಂದರು.

ಎಸ್‌ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಅದ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಪುತ್ತೂರು ವಿಧಾನ ಸಭಾ ಕ್ಷೇತ್ರ ಜೊತೆ ಕಾರ್ಯದರ್ಶಿ ಯಹ್ಯಾ ಕೂರ್ನಡ್ಕ, ಎಸ್‌ಡಿಪಿಐ ನಗರ ಸಮಿತಿ ಅಧ್ಯಕ್ಷರಾದ ಸಿರಾಜ್ ಕೂರ್ನಡ್ಕ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಮಸ್ತಫಾ ಲತೀಫಿ, ಕಬಕ ಬ್ಲಾಕ್ ಕಾರ್ಯದರ್ಶಿ ಫಾರೂಕ್ ತವಕ್ಕಲ್ ಮೊದಲಾದವರು ಉಪಸ್ಥಿತರಿದ್ದರು.

ವಿಧಾನ ಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪುತ್ತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅನ್ವರ್ ಪೆರುವಾಯಿ ವಂದಿಸಿದರು.

By dtv

Leave a Reply

Your email address will not be published. Required fields are marked *

error: Content is protected !!