ಉತ್ತರ ಪ್ರದೇಶ: ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣ ನಡೆಯುತ್ತಿದ್ದು ಈಗ ಅದರ ಜೊತೆಗೆ ಹೊಸದೊಂದು ಹೀನಾಯ ಘಟನೆ ಸೇರಿಕೊಂಡಿದೆ.ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ಈ ಹೀನ ಕೃತ್ಯ ನಡೆದಿದೆಯೆಂದು ವರದಿಯಾಗಿದೆ.

ಪ್ರವಾಸಕ್ಕೆಂದು ಹೋದ ವಿದ್ಯಾರ್ಥಿನಿ ಮೇಲೆ ಶಾಲಾ ಪ್ರಿನ್ಸಿಪಾಲ್ ಅಮಲು ಪದಾರ್ಥ ನೀಡಿ ಅತ್ಯಾಚಾರ ಮಾಡಿದ್ದಾನೆಂದು ತಿಳಿದು ಬಂದಿದೆ.
ಪ್ರಾಂಶುಪಾಲರ ವಿರುದ್ಧ ಅದೇ ಶಾಲೆಯಲ್ಲಿ ಓದುತ್ತಿರುವ 11ನೇ ತರಗತಿಯ ವಿದ್ಯಾರ್ಥಿನಿ ದೂರು ದಾಖಲು ಮಾಡಿದ್ದಾಳೆ.
ನವೆಂಬರ್ 23ರಂದು ಈ ಘಟನೆ ನಡೆದಿದ್ದು ಈ ಶಾಲೆಯ ಪ್ರಾಂಶುಪಾಲರು ಶಾಲೆಯ ಒಂಬತ್ತು ವಿದ್ಯಾರ್ಥಿಗಳನ್ನು ವೃಂದಾವನಕ್ಕೆ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದರು.
ಈ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ವಸತಿಗಾಗಿ ಹೋಟೆಲ್ನಲ್ಲಿ ಎರಡು ಕೊಠಡಿಗಳನ್ನು ತೆಗೆದುಕೊಂಡಿದ್ದರು.
ಒಂದು ಕೊಠಡಿಯಲ್ಲಿ ಎಂಟು ವಿದ್ಯಾರ್ಥಿಗಳು ಉಳಿದುಕೊಂಡಿದ್ದರೆ, ಇನ್ನೊಂದು ಕೊಠಡಿಯಲ್ಲಿ ಪ್ರಾಂಶುಪಾಲರು ಮತ್ತು 11ನೇ ತರಗತಿ ವಿದ್ಯಾರ್ಥಿನಿ 17 ವರ್ಷದ ಬಾಲಕಿ ಉಳಿದುಕೊಂಡಿದ್ದರು ಎನ್ನಲಾಗಿದೆ.

ಈ ವೇಳೆ ಪ್ರಾಂಶುಪಾಲರು ವಿದ್ಯಾರ್ಥಿನಿಯ ಆಹಾರದಲ್ಲಿ ಮಾದಕ ವಸ್ತುವನ್ನು ಬೆರೆಸಿ ಅಮಲು ಬರಿಸಿ ತದನಂತರ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.ಈ ಸಂದರ್ಭದಲ್ಲಿ ವಿಧ್ಯಾರ್ಥಿನಿಯು ಅಲ್ಪ ಸ್ವಲ್ಪ ಎಚ್ಚರವೂ ಇದ್ದು ಪ್ರತಿರೋಧ ವ್ಯಕ್ತಪಡಿಸಿದ್ದರೂ ಬೆದರಿಕೆ ಒಡ್ಡಿದ ಪ್ರಾಂಶುಪಾಲ ಮತ್ತೆ ಅತ್ಯಾಚಾರ ಎಸಗಿದ್ದೆನ್ನಲಾಗಿದೆ.

ತನ್ನ ಚಪಲ ತೀರಿಸುವ ಸಂದರ್ಭದಲ್ಲಿ ವಿದ್ಯಾರ್ಥಿನಿ ಪ್ರತಿರೋಧ ವ್ಯಕ್ತಪಡಿಸಿದಾಗ, ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವ ಬೆದರಿಕೆ ಹಾಕಿದ್ದು ಅಲ್ಲದೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.