ಬೆಳ್ತಂಗಡಿ: ಹಣದ ಬೇಡಿಕೆ ಇಟ್ಟು, ಖಾಸಗಿ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಅಪರಿಚಿತ ವ್ಯಕ್ತಿಯು ಬ್ಲ್ಯಾಕ್ ಮೇಲ್ ಮಾಡಿದ್ದಕ್ಕೆ ಹೆದರಿ ಬಿ.ಕಾಂ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಧರ್ಮಸ್ಥಳ ಗ್ರಾಮದ ಅಶೋಕ್ ನಗರ ನಿವಾಸಿ ಬೆಳ್ತಂಗಡಿ ಖಾಸಗಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹರ್ಷಿತ್ (19) ಎಂದು ಗುರುತಿಸಲಾಗಿದೆ.

ಹರ್ಷಿತ್ ಇನ್ಸ್ಟಾಗ್ರಾಂ ಖಾತೆಯ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಕ್ಕೆ ಬಂದಿದ್ದು, ಆತನೊಂದಿಗೆ ಚಾಟ್ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.
ಅದೇ ವ್ಯಕ್ತಿ ಹರ್ಷಿತ್ ಮೊಬೈಲ್ ಗೆ ವಿಡಿಯೋ ಕಾಲ್ ಮಾಡಿ ಮಾತನಾಡಿ, ವೈಯಕ್ತಿಕ ವಿಡಿಯೋ ನನ್ನ ಬಳಿ ಇದ್ದು, ಇದನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ.
ವಿಡಿಯೋ ವೈರಲ್ ಮಾಡಬಾರದು ಎಂದಾದರೆ ತನಗೆ 11,000 ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದನು.
ಇದಕ್ಕೆ ಹರ್ಷಿತ್ ಜ.23 ರವರೆಗೆ ಅವಕಾಶ ಕೊಡುವಂತೆ ಕೇಳಿದ್ದು, ಆದರೆ ಜ.24 ಮಧ್ಯಾಹ್ನದವರೆಗೂ ಹಣ ಹೊಂದಿಸಲು ಸಾಧ್ಯವಾಗದೇ ಇದ್ದುದ್ದರಿಂದ, ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.
ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ.


