ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಸ್ಪಷ್ಪ ಬಹುಮತದ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರ ಫಲಿತಾಂಶದಲ್ಲಿ ಗೊಂದಲ ಮುಂದುವರೆದಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲದಿಂದ ಜಯನಗರ ವಿಧಾನಸಭೆ ಕ್ಷೇತ್ರದ ಫಲಿತಾಂಶ ಪ್ರಕಟವಾಗಿಲ್ಲ.

ಮರು ಎಣಿಕೆ ವಿಚಾರದಲ್ಲಿ ಅಕ್ರಮವಾಗಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪರಸ್ಪರ ಆರೋಪಿಸಿದ್ದರು. ಎಲ್ಲ ಸುತ್ತುಗಳ ಮತ ಎಣಿಕೆ ಮುಗಿದ ಮೇಲೆ ಕಾಂಗ್ರೆಸ್ನ ಸೌಮ್ಯ ರೆಡ್ಡಿ 294 ಮತಗಳ ಅಂತರದಿಂದ ಬಿಜೆಪಿಯ ಸಿ.ಕೆ. ರಾಮಮೂರ್ತಿ ಅವರಿಗಿಂತ ಮುಂದಿದ್ದರು. ಈ ಸಂದರ್ಭದಲ್ಲಿ ರಾಮಮೂರ್ತಿ ಮರು ಎಣಿಕೆಗೆ ಮನವಿ ಮಾಡಿದರು. ಅದನ್ನು ಪುರಸ್ಕರಿಸಿದ ಚುನಾವಣೆ ಅಧಿಕಾರಿ ಮರು ಎಣಿಕೆ ಮಾಡಿದರು. ಆಗ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ದೊರೆಯಿತು.
‘ಮರುಎಣಿಕೆಯಲ್ಲಿ ಅಕ್ರಮವಾಗಿದೆ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಇದರ ವಿರುದ್ಧ ಬಿಜೆಪಿಯವರೂ ಘೋಷಣೆ ಕೂಗಿದರು. ಕಾಂಗ್ರೆಸ್ ಮುಖಂಡರಾದ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ ಸ್ಥಳದಲ್ಲಿ ಕುಳಿತು ಚುನಾವಣೆ ಅಧಿಕಾರಿ ವಿರುದ್ಧ ಆರೋಪಿಸಿದರು. ‘ಸಂಸದ ತೇಜಸ್ವಿ ಸೂರ್ಯ ಅವರನ್ನು ಏಕೆ ಒಳಗೆ ಬಿಟ್ಟಿರಿ’ ಎಂದು ಪ್ರಶ್ನಿಸಿದರು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.
ಜಯನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಗೆಲುವು ಸಾಧಿಸಿದ್ದರೂ ಪ್ರಭಾವಿ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಮರು ಎಣಿಕೆ ನೆಪದಲ್ಲಿ ಫಲಿತಾಂಶ ತಿರುಚಲು ಪ್ರಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಚುನಾವಣೆ ಅಧಿಕಾರಿಗಳ ನಡೆ ವಿರೋಧಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಂಸದ ಡಿ ಕೆ ಸುರೇಶ್ ಮತ್ತಿತರ ಮುಖಂಡರು ಮತ ಎಣಿಕೆ ಕೇಂದ್ರ ಜಯನಗರದ ಆರ್ ವಿ ಶಿಕ್ಷಣ ಸಂಸ್ಥೆ ಎದುರು ಧರಣಿ ನಡೆಸಿದ್ದಾರೆ