ಗಂಡ ಬೇರೆ ಮನೆ ಮಾಡಲಿಲ್ಲವೆಂದು ಆರೋಪಿಸಿ ಅತ್ತೆ ಹಾಗೂ ಗಂಡನ ಮೇಲೆ ಹೆಂಡತಿಯೊಬ್ಬಳು ಹಲ್ಲೆ ಮಾಡಿದ್ದು, ತೀವ್ರವಾಗಿ ಹಲ್ಲೆಗೊಳಗಾಗಿದ್ದ ಅತ್ತೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.
ಮೃತ ಅತ್ತೆಯನ್ನು ಮೆಹಾಬೂಬಿ ಯಾಕೂಶಿ(53) ಎಂದು ಗುರುತಿಸಲಾಗಿದೆ.
ಮೇ.22ರಂದು ಸೊಸೆ ಮೇಹರೂಣಿ ತನ್ನ ಇಬ್ಬರು ಸಹೋದರರ ಜತೆ ಸೇರಿ ರಾಡ್ನಿಂದ ಗಂಡ ಸುವಾನ್ ಮತ್ತು ಅತ್ತೆ ಮೆಹಬೂಬಿ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅತ್ತೆ ಮೆಹಬೂಬಿ ಇಂದು(ಜೂ.13) ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಾವಿಗೆ ಸೊಸೆ ಮೇಹರೂಣಿ ಮತ್ತು ಆಕೆಯ ಇಬ್ಬರು ತಮ್ಮಂದಿರೇ ಕಾರಣ ಅಂತಾ ಪತಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಮೇಹರೂಣಿ ಮತ್ತು ಸುವಾನ್:
ಇನ್ನು ಇವರಿಬ್ಬರು ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಒಂದು ವರ್ಷ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಬಿರುಗಾಳಿ ಬೀಸಲಾರಂಬಿಸಿತ್ತು. ಹೌದು ಒಂದು ವರ್ಷದ ಬಳಿಕ ಪತ್ನಿ ಮೇಹರೂಣಿ ಬೇರೆ ಮನೆ ಮಾಡುವಂತೆ ಗಂಡನಿಗೆ ಕಿರುಕುಳ ನೀಡಲು ಆರಂಭಿಸಿದ್ದಳು. ಇದನ್ನ ಒಪ್ಪದ ಸುವಾನ್ ಹಾಗೂ ಅತ್ತೆ ಜೊತೆ ನಿರಂತರ ಜಗಳವಾಡುತ್ತಿದ್ದಳು. ಇದೇ ಜಗಳ ತಾರಕಕ್ಕೇರಿ ಮೇ. 22ರಂದು ಪತ್ನಿ ಮತ್ತು ಅವಳ ಸಹೋದರರನ್ನು ಕರೆಯಿಸಿ ಇಬ್ಬರ ಮೇಲೂ ಹಲ್ಲೆ ಮಾಡಿಸಿದ್ದಳು. ಇದರಿಂದ ತೀವ್ರ ಗಾಯಗೊಂಡ ಅತ್ತೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪತ್ನಿ ಕುಟುಂಬಸ್ಥರಿಂದ ಪ್ರತ್ಯಾರೋಪ! ಕೊಲೆ ಗೆ ಪತ್ನಿ ಕಾರಣವಲ್ಲವಂತೆ! ? :
ಮಗ ತಮ್ಮನ್ನು ಬಿಟ್ಟು ಬೇರೆ ಮನೆಗೆ ಹೋಗುವುದನ್ನು ವಿರೋಧಿಸಿದ್ದಕ್ಕೆ ತನ್ನ ತವರು ಮನೆಯವರನ್ನು ಕರೆಯಿಸಿ ಅತ್ತೆ ಹಾಗೂ ಪತಿ ಸುವಾನ್ ಮೇಲೆ ಮೆಹರೂಣಿ ಮಾರಣಾಂತಿಕ ಹಲ್ಲೆ ನಡೆಸಿದ್ದಳು. ಇದರಿಂದ ಗಾಯಗೊಂಡಿದ್ದ ಅತ್ತೆ ಮಹಾಬೂಬಿ ಯಾಕೂಶಿ ಮೇ 22 ರಂದು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲು ಆಗಿ, ಚಿಕಿತ್ಸೆ ಪಡೆದು ಜೂ.1ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ವಾಪಸ್ ಆಗಿದ್ದರು. ಮನೆಯಲ್ಲಿ ಯಾವುದೇ ಕೆಲಸ ಮಾಡುವುದಕ್ಕಾಗದೇ ವಿಶ್ರಾಂತಿಯಲ್ಲಿದ್ದರು.
ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಹಾಬೂಬಿ ಏಕಾಏಕಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ಥಳೀಯರು ಹಾಗೂ ಅತ್ತೆಯ ಸಂಬಂಧಿಕರು ಸೊಸೆ ಮೆಹರೂಣಿ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಮನೆಯವರನ್ನು ಕೇಳಿದರೆ, ಮಹಾಬೂಬಿ ಲೋ ಬಿಪಿ ಇಲ್ಲವೇ ಹೃದಯಾಘಾತದಿಂದ ಸಾವನಪ್ಪಿದ್ದಾರೆಂದು ಹೇಳಿದ್ದಾರೆ. ಈಗ ಮೃತ ಅತ್ತೆಯ ಶವವನ್ನು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಈಗ ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಇದೀಗ ಮೂರು ಜನರ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೆ ಮತ್ತು ಸಹೋದರರನ್ನ ಬಂಧಿಸುವಂತೆ ಪತಿ ಮತ್ತು ಕುಟುಂಬಸ್ಥರು ಮನವಿ ಮಾಡಿದ್ದಾರೆ.