dtvkannada

ಶ್ರೀನಗರ: ಕಾಲ ಬದಲಾದಂತೆ ಸಂಬಂಧಗಳಲ್ಲೂ ಬದಲಾವಣೆಯಾಗುತ್ತಿದ್ದು, ಎಷ್ಟೋ ಸಂಬಂಧಗಳು ಅರ್ಥ ಕಳೆದುಕೊಳ್ಳಲಾರಂಭಿಸಿದೆ. ತನ್ನ ಮಕ್ಕಳಿಗಾಗಿ ಜೀವವನ್ನೇ ಒತ್ತೆಯಾಗಿಡುವ ಅಮ್ಮಂದಿರು ಒಂದೆಡೆಯಾದರೆ ತನ್ನ ಸ್ವಾರ್ಥಕ್ಕಾಗಿ ಮಕ್ಕಳ ಜೀವ ತೆಗೆಯಲು ಕೂಡ ಹೇಸದ ಕೆಲವು ಅಮ್ಮಂದಿರು ಇನ್ನೊಂದೆಡೆ. ಹಿಮಾಚಲ ಪ್ರದೇಶದ ಚಂಬದಲ್ಲಿ 25 ವರ್ಷದ ವ್ಯಕ್ತಿ ಹಾಗೂ ಮೂವರ ಮಕ್ಕಳ ಕೊಲೆಯಾಗಿತ್ತು. ಆ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆ ವ್ಯಕ್ತಿಯ ಹೆಂಡತಿಯೇ ಆತನನ್ನು ಹಾಗೂ ಮೂವರು ಮಕ್ಕಳನ್ನು ಕೊಲೆ ಮಾಡಿದ್ದಾಳೆಂಬ ವಿಷಯವನ್ನು ಪತ್ತೆ ಹಚ್ಚಿದ್ದಾರೆ.

ಸೆ. 14ರಂದು ಚಂಬ ಪ್ರದೇಶದ ಇಲ್ಲಿನ ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡು 25 ವರ್ಷದ ಪುರುಷ ಹಾಗೂ ಆತನ ಮೂವರು ಮಕ್ಕಳು ಸುಟ್ಟು ಕರಕಲಾಗಿದ್ದರು. ಅದೃಷ್ಟವಶಾತ್ ಆತನ ಹೆಂಡತಿ ಬದುಕುಳಿದಿದ್ದಳು. ಆದರೆ, ಇದು ಅದೃಷ್ಟದಿಂದಲ್ಲ, ಮೊದಲೇ ಮಾಡಿದ ಪ್ಲಾನ್ನಿಂದ ಎಂಬುದು ಈಗ ಬಯಲಾಗಿದೆ. ಪಕ್ಕದ ಮನೆಯವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ನೂರಾ ತನ್ನ ಗಂಡನನ್ನು ಕೊಲೆ ಮಾಡಲು ಪ್ರಿಯಕರನ ಸಹಾಯ ಪಡೆದಿದ್ದಳು. ಯಾರಿಗೂ ಅನುಮಾನ ಬಾರದಂತೆ ಗಂಡನನ್ನು ಕೊಲೆ ಮಾಡಲು ನಿರ್ಧರಿಸಿದ್ದ ಆಕೆ ಆತನ ಜೊತೆ ಮೂವರು ಮಕ್ಕಳನ್ನು ಕೂಡ ಬಲಿ ನೀಡಿದ್ದಾಳೆ.

ಆಕೆಯ ಅಕ್ರಮ ಸಂಬಂಧವನ್ನು ಮುಚ್ಚಿಡಲು 25 ವರ್ಷದ ರಫಿ ಮೊಹಮ್ಮದ್, 6 ವರ್ಷದ ಮಗಳು ಜೈಟುನ್, 2 ವರ್ಷದ ಮಗಳು ಜುಲೈಕ, 4 ವರ್ಷದ ಮಗ ಸಮೀರ್ ಮನೆಯಲ್ಲಿದ್ದಾಗ ಬೆಂಕಿ ಹಚ್ಚಿ ಕೊಂದಿದ್ದಾಳೆ. ಇಲ್ಲಿನ ಕರತೋಷ್ ಎಂಬ ಗ್ರಾಮದಲ್ಲಿ ಸೆ. 14ರಂದು ಮನೆಯೊಳಗೆ ಬೆಂಕಿ ಹಚ್ಚಿ ನಾಲ್ವರನ್ನೂ ಕೊಲೆ ಮಾಡಿದ್ದಾಳೆ. ಬಳಿಕ ತನಗೂ ಸಣ್ಣ ಪುಟ್ಟ ಗಾಯಗಳನ್ನು ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಹೀಗಾಗಿ, ಇದೊಂದು ಆಕಸ್ಮಿಕ ಬೆಂಕಿ ಅವಘಡ ಎಂದು ನಂಬಲಾಗಿತ್ತು.

ಆದರೆ, ರಫಿಯ ತಂದೆ ಈ ಘಟನೆಯ ಹಿಂದೆ ತಮ್ಮ ಸೊಸೆಯ ಕೈವಾಡ ಇರುವ ಅನುಮಾನವಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ನನ್ನ ಮಗ ಹಾಗೂ ಮೊಮ್ಮಕ್ಕಳ ಸಾವು ಆಕಸ್ಮಿಕವಲ್ಲ. ಅದೊಂದು ಪೂರ್ವ ನಿಯೋಜಿತ ಕೊಲೆ ಎಂದು ದೂರಿನಲ್ಲಿ ತಿಳಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲೂ ರಫಿಯ ತಲೆಗೆ ಹಿಂಭಾಗದಿಂದ ಬಲವಾದ ಪೆಟ್ಟು ಬಿದ್ದಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿತ್ತು. ಇದರಿಂದ ತನಿಖೆ ನಡೆಸಿದ ಪೊಲೀಸರು ಅಸಲಿ ವಿಷಯವನ್ನು ಬಯಲಿಗೆಳೆದಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!