ಹುಬ್ಬಳ್ಳಿ: ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಆರ್ಎಸ್ಎಸ್ ಅನ್ನು ಜಿದ್ದಿಗೆ ಬಿದ್ದಂತೆ ಟೀಕಿಸುತ್ತಿವೆ. ದೇಶ ರಕ್ಷಣೆಗೆ ಬದ್ಧವಾಗಿರುವ ಸಂಘ ಇಲ್ಲದೇ ಹೋಗಿದ್ದರೆ ಭಾರತದಲ್ಲಿ ಈ ವೇಳೆಗಾಗಲೇ ನಾಲ್ಕೈದು ಪಾಕಿಸ್ತಾನಗಳು ನಿರ್ಮಾಣವಾಗುತ್ತಿದ್ದವು ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ’ದೊಡ್ಡ ಇತಿಹಾಸ ಹೊಂದಿರುವ ಆರ್ಎಸ್ಎಸ್ನಿಂದಾಗಿ ದೇಶ ಸುರಕ್ಷಿತವಾಗಿ ಹಾಗೂ ಶಾಂತಿರೀತಿಯಿಂದ ಉಳಿದುಕೊಂಡಿದೆ. ದೇಶದ ಒಗ್ಗಟ್ಟು ಹಾಗೂ ಏಕತೆಯನ್ನು ನಿರ್ಮಿಸುವ ಕೆಲಸವನ್ನು ಆರ್ಎಸ್ಎಸ್ ಮಾಡುತ್ತಿದೆ’ ಎಂದರು.’ಸಂಘವನ್ನು ಟೀಕೆ ಮಾಡುವುದು ಕಾಂಗ್ರೆಸ್ ಹಾಗೂ ಜೆಡಿಎಸ್ನವರಿಗೆ ಫ್ಯಾಷನ್ ಆಗಿದೆ. ಸ್ಪರ್ಧೆಗೆ ಬಿದ್ದವರಂತೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸಂಘವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ರಾಜಕಾರಣದ ಸಲುವಾಗಿ ಮಾಡುತ್ತಿರುವ ಟೀಕೆಯಿದು‘ ಎಂದರು.