ಭಟ್ಕಳ: ರಿಡ್ಜ್ ಕಾರೊಂದು ರಸ್ತೆಯಲ್ಲಿದ್ದ ದನವೊಂದನ್ನು ತಪ್ಪಿಸಲು ಹೋಗಿ, ರಿಕ್ಷಾ ಗೆ ಡಿಕ್ಕಿ ಹೊಡೆದು ನಂತರ ಮಗುಚಿ ಬಿದ್ದು ನಾಲ್ವರು ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ನಿನ್ನೆ ನಡೆದಿದೆ.
ಗಾಯಗೊಂಡವರನ್ನು ಕುಂದಾಪುರದ ಪ್ರಾತೇಶ ಮೊಗವೀರ (18), ರಾಮಚಂದ್ರ ಶೇಟ್ (17), ಭರತ ಜೋಗಿ (19), ನೂತನ ಮಡಿವಾಳ (18) ಎಂದು ಗುರುತಿಸಲಾಗಿದೆ.
ಕುಂದಾಪುರ ಕಡೆಯಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ರಿಡ್ಜ್ ಕಾರು, ರಸ್ತೆಗೆ ಅಡ್ಡಲಾಗಿ ಬಂದ ದನವನ್ನು ತಪ್ಪಿಸುವ ಭರದಲ್ಲಿ, ಎದುರಿಗೆ ನಿಂತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಬೊಲೆರೋ ಪಿಕ್ಅಪ್ ವಾಹನಕ್ಕೆ ಡಿಕ್ಕಿಯಾಗಿ ಸರಣಿ ಅಪಘಾತವಾಗಿದೆ. ಅಪಘಾತದಲ್ಲಿ ರಿಟ್ಜ್ ಕಾರು ಸಂಪೂರ್ಣ ಜಖಂಗೊಂಡಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.