ಸುಳ್ಯ: ಭಾರತ ದೇಶದ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕಲ್ಲುಗುಂಡಿ ಹಯಾತುಲ್ ಇಸ್ಲಾಂ ಮದ್ರಸಾದಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.
ಜಮಾಅತ್ ಅಧ್ಯಕ್ಷರಾದ ಅಬ್ಬಾಸ್ ಹಾಜಿಯವರು ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕ ಭಾಷಣ ನಡೆಸಿದರು . ಗಣರಾಜ್ಯೋತ್ಸವದ ಹಿನ್ನೆಲೆಯನ್ನು ವಿವರಿಸಿದ ಅವರು ನವ ತಲೆಮಾರಿನ ಮಕ್ಕಳು ಭಾರತದ ನೈಜ ಇತಿಹಾಸ ಮತ್ತು ಸಂವಿಧಾನದ ಕುರಿತು ಸರಿಯಾದ ಮಾಹಿತಿಯನ್ನು ಹೊಂದಿರಬೇಕು. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿರುವಂತಹ ಷಡ್ಯಂತ್ರಗಳನ್ನು ಎದುರಿಸಲು ಈಗಿಂದಲೇ ಸಿದ್ಧರಾಗಬೇಕು ಎಂದು ಕರೆ ನೀಡಿದರು .
ಪ್ರಾರ್ಥನೆಗೆ ನೇತೃತ್ವ ನೀಡಿದ ಸ್ಥಳೀಯ ಖತೀಬರಾದ ಅಹ್ಮದ್ ನಈಂ ಫೈಝಿ ಮಅ’ಬರಿಯವರು ಗಣರಾಜ್ಯೋತ್ಸವದ ಸಂದೇಶ ಭಾಷಣವನ್ನು ನೆರವೇರಿಸಿದರು. ಮದರಸಾದ ಎಸ್ಕೆ.ಎಸ್.ಬಿ.ವಿ ವಿದ್ಯಾರ್ಥಿಗಳಿಂದ ಬಾಲ ಇಂಡಿಯಾ ಕಾರ್ಯಕ್ರಮ ನಡೆಯಿತು .
ದೇಶಭಕ್ತಿ ಗೀತೆಯನ್ನು ಹಾಡಿದ ವಿದ್ಯಾರ್ಥಿಗಳಿಗೆ ಮದ್ರಸ ಪ್ರಾಧ್ಯಾಪಕರಾದ ಅಬ್ದುನ್ನಾಸಿರ್ ಫೈಝಿಯವರು ದೇಶ ಬದ್ಧತೆಯ ಪ್ರತಿಜ್ಞಾವಿಧಿ ಬೋಧಿಸಿದರು. ಮದ್ರಸಾ ಅಧ್ಯಾಪಕರು, ಊರ ಹಿರಿಯರು, ಆಡಳಿತ ಸಮಿತಿ ಸದಸ್ಯರು, ಪೋಷಕರು ಮತ್ತು ಯುವಕರು ಉಪಸ್ಥಿತರಿದ್ದರು. ಕಮ್ಯುನಿಟಿ ವೆಲ್ಫೇರ್ ಫೌಂಡೇಶನ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.