ಉಡುಪಿ: ಹಿಜಾಬ್ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಪೈಕಿ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಮೂವರು ವಿದ್ಯಾರ್ಥಿನಿಯರಿಗೆ ಇಂದಿನ ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿದ್ಯಾರ್ಥಿನಿ ಅಲ್ಮಾಸ್ ಎ.ಎಚ್, ನಮ್ಮ ಪೈಕಿ ನಾನು ಸೇರಿದಂತೆ ಮೂವರು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ ಇಂದಿನ ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗಲು ಪ್ರಾಂಶುಪಾಲರು ಅವಕಾಶ ನೀಡಿಲ್ಲ ಹಾಗೂ ಪೊಲೀಸ್ ದೂರು ನೀಡುವುದಾಗಿ ಬೆದರಿಕೆ ಹಾಕಿ ಕಳುಹಿಸಿದ್ದಾರೆ.
ನಾವು ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗಲು ಬಹಳ ಉತ್ಸುಕರಾಗಿ ಹೋಗಿದ್ದೆವು. ಆದರೆ ಕಾಲೇಜು ತಲುಪಿದಾಗ ನಮ್ಮ ಪ್ರಾಂಶುಪಾಲರು “ನೀವು ಇಲ್ಲಿಂದ ಐದು ನಿಮಿಷದಲ್ಲಿ ಹೊರಡಬೇಕು, ಇಲ್ಲವಾದಲ್ಲಿ ನಾನು ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ” ಎಂದು ನಮಗೆ ಬೆದರಿಕೆ ಹಾಕಿದಾಗ ತುಂಬಾ ಬೇಸರವಾಯಿತು” ಎಂದು ಅಲ್ಮಾಸ್ ಹೇಳಿದ್ದಾರೆ.
ಈ ಟ್ವೀಟ್ ಅನ್ನು ಅಂತರಾಷ್ಟ್ರೀಯ ಮಾಧ್ಯಮ, ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ, ಡಿಜಿಪಿ, ಉಡುಪಿ ಡಿಸಿ, ಉಡುಪಿ ಎಸ್ ಪಿಗೆ ಟ್ಯಾಗ್ ಮಾಡಿದ್ದಾರೆ.