ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಂತಕತೆ, ಸ್ಪಿನ್ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನರ್(53) ಹೃದಯಘಾತದಿಂದ ನಿಧನರಾಗಿದ್ದಾರೆ.
ಶೇನ್ ವಾರ್ನ್ ನಿಧನವಾಗಿರುವ ಬಗ್ಗೆ ಆಸ್ಟ್ರೇಲಿಯಾದ ಫಾಕ್ಸ್ ಕ್ರಿಕೆಟ್ ವರದಿ ಮಾಡಿದೆ. ಹೃದಯಾಘಾತದಿಂದ ಸಾವು ಸಂಭವಿಸಿರುವ ಬಗ್ಗೆ ಶಂಕೆ ಇದ್ದು, ಶೇನ್ ವಾರ್ನ್ ಹಠಾತ್ ನಿಧನಕ್ಕೆ ವಿಶ್ವ ಕ್ರಿಕೆಟ್ ದಿಗ್ಭಮೆ ವ್ಯಕ್ತಪಡಿಸಿದೆ.
ಶುಕ್ರವಾರ ಮುಂಜಾನೆ ರೋಡ್ ಮಾರ್ಷ್ ನಿಧನಕ್ಕೆ ಸಂತಾಪ ಸೂಚಿಸಿದ ಶೇನ್ ವಾರ್ನ್, ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ನಿಧನ ಸುದ್ದಿ ತಿಳಿದು ವಿಶ್ವ ಕ್ರಿಕೆಟ್ ಗೆ ಸಿಡಿಲು ಬಡಿದಂತಾಗಿದೆ.
ವಾರ್ನ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಭಾರತದ ಮಾಜಿ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಟ್ವಿಟರ್ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ವಾರ್ನ್ 15 ವರ್ಷಗಳಿಂದ ಆಸ್ಟ್ರೇಲಿಯಾ ಪರ ಶ್ರೇಷ್ಠ ಬೌಲರ್ ಆಗಿದ್ದು 708 ಟೆಸ್ಟ್ ವಿಕೆಟ್ಗಳನ್ನು ಕಬಳಿಸಿದ್ದಾರೆ. ಮುತ್ತಯ್ಯ ಮುರಳೀಧರನ್ ನಂತರ ವಿಶ್ವ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡ ಖ್ಯಾತಿ ಶೇನ್ ವಾರ್ನ್ ಅವರದ್ದು.
ವಾರ್ನ್ ವೃತ್ತಿ ಬದುಕು:
ಶೇನ್ ವಾರ್ನ್ ಅವರು 1992 ರಲ್ಲಿ ಭಾರತದ ವಿರುದ್ಧ ಟೆಸ್ಟ್ಗೆ ಪಾದಾರ್ಪಣೆ ಮಾಡಿದರು. ಮೊದಲ ಟೆಸ್ಟ್ನಲ್ಲಿ ಕೇವಲ 2 ವಿಕೆಟ್ಗಳನ್ನು ಪಡೆದರು. ಆದರೆ ನಂತರ ಅವರ ಪ್ರತಿಭೆ ಅನಾವರಣಗೊಂಡಿತ್ತು. ಪ್ರತಿಯೊಬ್ಬ ಬ್ಯಾಟ್ಸ್ಮನ್ಗಳು ಅವರ ಸ್ಪಿನ್ ಜಾದೂಗೆ ಬಲಿಯಾಗಿ ಹೋಗಿದ್ದರು. ಸುಮಾರು 16 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ, ವಾರ್ನ್ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರು. ತಮ್ಮ 145 ಟೆಸ್ಟ್ ವೃತ್ತಿಜೀವನದಲ್ಲಿ 708 ವಿಕೆಟ್ಗಳನ್ನು ಪಡೆದು ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ (800 ವಿಕೆಟ್) ನಂತರ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ಗಳನ್ನು ಪಡೆದಿದ್ದಾರೆ. ಜೊತೆಗೆ 1999 ರ ವಿಶ್ವಕಪ್ ಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಹಾಗೆಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದರು.
ಮಾರ್ಚ್ 4 ಶುಕ್ರವಾರ ಆಸ್ಟ್ರೇಲಿಯಾ ಕ್ರಿಕೆಟ್ಗೆ ಒಳ್ಳೆಯ ದಿನವಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಆಸ್ಟ್ರೇಲಿಯಾ ತನ್ನ ಇಬ್ಬರು ಶ್ರೇಷ್ಠ ದಂತಕಥೆಗಳನ್ನು ಒಂದೇ ದಿನದಲ್ಲಿ ಕಳೆದುಕೊಂಡಿದೆ. ಶುಕ್ರವಾರ ಬೆಳಗ್ಗೆ ಮಾಜಿ ವಿಕೆಟ್ ಕೀಪರ್ ರಾಡ್ನಿ ಮಾರ್ಷ್ ಹೃದಯಾಘಾತದಿಂದ ಜಗತ್ತಿಗೆ ವಿದಾಯ ಹೇಳಿದರು. ನಂತರ ತಡರಾತ್ರಿ ಶೇನ್ ವಾರ್ನ್ ಸಾವಿನ ಸುದ್ದಿ ಆಸ್ಟ್ರೇಲಿಯಾ ಸೇರಿದಂತೆ ಇಡೀ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ.
ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾದ ಶೇನ್ ವಾರ್ನ್ ಅವರ ನಿಧನದ ಬಗ್ಗೆ ಸಚಿನ್ ತೆಂಡೂಲ್ಕರ್ ಟ್ವೀಟರ್ನಲ್ಲಿ ಸಂತಾಪ ಸೂಚಿಸಿದ್ದಾರೆ. ಇದರಲ್ಲಿ, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಭಾರತೀಯರಿಗೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಹಾಗೆಯೇ ಭಾರತೀಯರ ಹೃದಯದಲ್ಲೂ ನೀವು ವಿಶೇಷ ಸ್ಥಾನ ಗಳಿಸಿದ್ದೀರಿ. ನೀವಿದ್ದ ಜಾಗದಲ್ಲಿ ಹರುಷಕ್ಕೆ ಕೊರತೆ ಇರುತ್ತಿರಲಿಲ್ಲ. ನಿಮ್ಮ ಸಾವು ತುಂಬಾ ದುಃಖ ತಂದಿದೆ. ವಿಲ್ ಮಿಸ್ ಯು ವಾರ್ನಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮೈದಾನದಲ್ಲಿ ನಮ್ಮ ಸ್ಪರ್ಧೆ ಮತ್ತು ಮೈದಾನದ ಹೊರಗೆ ನಮ್ಮ ಹಾಸ್ಯಮಯ ಕ್ಷಣಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.