dtvkannada

ಪುತ್ತೂರು: ಗೋಹತ್ಯೆ ರಾಜ್ಯ-ದೇಶದಲ್ಲಿ ಚರ್ಚೆಯಾಗುತ್ತಿರುವ ಬಹುದೊಡ್ಡ ವಿಚಾರ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಗೋಹತ್ಯೆ ನಿಷೇಧ ಬಗ್ಗೆ ಕಾನೂನು ಜಾರಿ ಮಾಡಿವೆ. ಆದರೂ ಅಕ್ರಮ ಗೋಸಾಗಾಟ, ಅಕ್ರಮ ಗೋಹತ್ಯೆ ನಡೆಯುತ್ತಿದೆ. ಈ ಮಧ್ಯೆ ಮುಸ್ಲಿಂ ಸಹೋದರರು ಜಾನುವಾರುಗಳನ್ನು ತಮ್ಮ ಕುಟುಂಬಸ್ಥರಂತೆ ಸಾಕಿ, ಸಲಹುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಆರ್ಲಪದವಿನ ನೆಲ್ಲಿತ್ತಿಮಾರು ಎಂಬಲ್ಲಿನ ಉಮ್ಮರ್ ಜನಪ್ರಿಯ, ಎನ್.ಎಸ್. ಇಸುಬು ಮತ್ತು ರಝಾಕ್ ಎಂಬ ಮೂವರು ಹೈನುಗಾರಿಕೆ ಮಾಡುವ ಸಹೋದರರು. ಇವರು ತಮ್ಮ ಅಜ್ಜನ ಕಾಲದಿಂದಲೂ ಜಾನುವಾರುಗಳನ್ನು ಸಾಕುವುದನ್ನೇ ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಊರಿನವರಿಗೆ ಬೇಡವಾದ ಗಂಡು ಕರುಗಳಿಗೂ ಇವರೇ ಆಶ್ರಯದಾತರು.

ಈ ಸಹೋದರರು ಸದ್ಯ 14 ಜಾನುವಾರುಗಳನ್ನು ಸಾಕುತ್ತಿದ್ದಾರೆ. ಇದರಲ್ಲಿ ಬಹುತೇಕ ಎತ್ತುಗಳೇ ಆಗಿವೆ. ಗಿರ್, ಕೊರಿಯನ್ ಮಿಕ್ಸ್, ಸಾಹೀವಾಲಾ, ಎಚ್.ಎಫ್., ದೇಶೀಯ ತಳಿಗಳ ಹತ್ತು ಹಲವು ಜಾನುವಾರುಗಳನ್ನು ಇವರು ಸಾಕುತ್ತಿದ್ದಾರೆ.

ಈ ಸಹೋದರರ ತಂದೆ ದಿ. ಮೊಯಿದು ಕುಂಞಿ ಹಿಂದೆ ಕಂಬಳಗಳಲ್ಲಿ ಕೋಣಗಳನ್ನು ಓಡಿಸುತ್ತಿದ್ದರು. ಅವರಿಗೆ ಜಾನುವಾರುಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವರು ಕೂಡಾ ಅನೇಕ ಜಾನುವಾರುಗಳನ್ನು ಸಾಕಿ ಸಲಹುತ್ತಿದ್ದರು. ತಂದೆಯ ಹವ್ಯಾಸವನ್ನೇ ಈ ಸಹೋದರರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಎಲ್ಲಾ ಗೋವುಗಳಿಗೂ ಮುದ್ದಾದ ಹೆಸರುಗಳನ್ನಿಟ್ಟು, ಪ್ರತಿಯೊಂದಕ್ಕೂ ಅವುಗಳಿಗೆ ಬೇಕಾದ ವಿವಿಧ ಬಗೆಯ ಹಿಂಡಿ, ಹುಲ್ಲು, ಒಣಹುಲ್ಲು ಮುಂತಾದ ಆಹಾರಗಳನ್ನು ಪೂರೈಸುವುದರಲ್ಲೇ ಖುಷಿ ಕಾಣುತ್ತಿದ್ದಾರೆ. ಬಿಸಿಲಿನ ಝಳ ಹೆಚ್ಚಾದರೆ ಗೋವುಗಳಿಗೂ ತಣ್ಣೀರಿನ ಸ್ನಾನ ಮಾಡಿಸುತ್ತಾರೆ. ಪ್ರತಿನಿತ್ಯ ಪ್ರತಿಯೊಂದು ಗೋವಿನ ಆರೋಗ್ಯವನ್ನೂ ಪರೀಕ್ಷಿಸಿ, ರೋಗಗಳು ಬಾಧಿಸದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ. ಅವುಗಳನ್ನೂ ತಮ್ಮ ಕುಟುಂಬದ ಸದಸ್ಯರಂತೆ ಅಕ್ಕರೆಯಿಂದ ಸಾಕುತ್ತಿರುವುದು ಜಾನುವಾರುಗಳ ಮೇಲೆ ಅವರಿಗಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಇಲ್ಲಿರುವ ಬೃಹತ್ ಗಾತ್ರದ ಗಿರ್ ಹೋರಿ, ಮುರುಗಾ, ಜಾನುವಾರು ಪ್ರದರ್ಶನಗಳಲ್ಲಿಯೂ ಜನಮನ ಸೆಳೆಯುತ್ತವೆ.

ಎರಡು ಜತೆ ಓಟದ ಕೋಣಗಳಿವೆ: ಉಮ್ಮರ್ ಜನಪ್ರಿಯ ಅವರು ವಿವಿಧ ತಳಿಯ ಜಾನುವಾರುಗಳೊಂದಿಗೆ ಕಂಬಳದ ಕೋಣಗಳನ್ನೂ ಸಾಕುತ್ತಿದ್ದಾರೆ. ಪ್ರಸ್ತುತ ಅವರಲ್ಲಿ ಎರಡು ಜತೆ ಓಟದ ಕೋಣಗಳಿದ್ದು, ಯಾವುದೇ ಭಾಗದಲ್ಲಿ ಕಂಬಳ ನಡೆದರೂ ‘ಕಾಟಿ-ಕೊಕ್ಕೆ’ ಹೆಸರಿನ ಕೋಣಗಳ ಜೋಡಿ ಅಲ್ಲಿ ಭಾಗವಹಿಸುತ್ತದೆ. ಕಂಬಳದ ಕೋಣಗಳನ್ನು ಸಾಕಲು ಹೆಚ್ಚು ಖರ್ಚಾಗುತ್ತದೆ. ಆದರೂ ಕಂಬಳದ ಕೋಣಗಳನ್ನು ಸಾಕುವುದರ ಜೊತೆ ಜೊತೆಗೆ ಜಾನುವಾರುಗಳ ಸಾಕಣೆಯನ್ನೂ ಮುಂದುವರಿಸಿದ್ದಾರೆ.

ಗಿರ್ ತಳಿಯ ಹೋರಿಯೊಂದನ್ನು ಪೇಟೆಗೆ ಬಿಟ್ಟಿದ್ದಾರೆ
ಉಮ್ಮರ್ ಜನಪ್ರಿಯ ಅವರ ಗೋ ಪ್ರೇಮ ಊರಿನ ಮಂದಿಗೆ ಅಚ್ಚುಮೆಚ್ಚು. ಅದಕ್ಕೆ ಉದಾಹರಣೆಯೆಂಬಂತೆ ಆರ್ಲಪದವಿನಲ್ಲಿರುವ ಹೊಟೇಲ್, ಅಂಗಡಿ ಮುಂಗಟ್ಟುಗಳ ಮಾಲಕರು ಒಂದು ಗೋವನ್ನು ಪೇಟೆಯಲ್ಲಿ ಬಿಡುವಂತೆ ಉಮ್ಮರ್ ಅವರನ್ನು ಒತ್ತಾಯಿಸಿದ್ದರು. ಅಂತೆಯೇ, ಗಿರ್ ತಳಿಯ ಹೋರಿಯೊಂದನ್ನು ಪೇಟೆಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಹೋರಿ ಊರಿನವರು ನೀಡುವ ಆಹಾರಗಳನ್ನು ತಿಂದುಕೊಂಡು ಹಾಯಾಗಿದೆ. ಈ ಹೋರಿ ಪ್ರತೀ ಎರಡು ದಿನಗಳಿಗೊಮ್ಮೆ ಉಮ್ಮರ್ ಅವರ ಮನೆಗೆ ತಪ್ಪದೆ ಬಂದು ಹೊಟ್ಟೆ ತುಂಬಾ ತಿಂದು ಮರಳುತ್ತದೆ.

ಗೋಹತ್ಯೆಗೆ ಒಯ್ಯುವ ಜಾನುವಾರುಗಳನ್ನು ರಕ್ಷಿಸಿದರಷ್ಟೇ ಸಾಲದು. ಅವುಗಳನ್ನು ಈ ರೀತಿ ಅಕ್ಕರೆಯಿಂದ ಪೋಷಿಸುವುದೂ ಕೂಡ ಅತ್ಯಗತ್ಯ ಎಂಬುದನ್ನು ಉಮ್ಮರ್ ಸಹೋದರರು ತೋರಿಸಿಕೊಟ್ಟಿದ್ದಾರೆ. ಇವರ ದನವನ್ನೂ ಕದ್ದೊಯ್ದ ಖದೀಮರು ಉಮ್ಮರ್ ಅವರ ಮನೆಯಲ್ಲಿ ಸಾಕುತ್ತಿದ್ದ ದನವೊಂದನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದ ಸಂದರ್ಭ ಅವರ ತಾಯಿ ಬೀಪಾತುಮ್ಮ ಚಿಂತೆಗೀಡಾಗಿದ್ದರು. ಅದು ಅವರ ತಾಯಿಯ ಪ್ರೀತಿಯ ಗೋವು ಆಗಿತ್ತು.

ಸುಮಾರು ಒಂದು ವಾರ ಊಟವನ್ನೂ ಮಾಡದೆ ಕಳೆದುಹೋದ ಗೋವಿನ ಕುರಿತು ವಿಚಾರಿಸುತ್ತಾ, ದುಃಖ ತೋಡಿಕೊಳ್ಳುತ್ತಿದ್ದರು ಎಂದು ಗೋವಿನ ಮೇಲಿನ ತಾಯಿಯ ಪ್ರೀತಿಯನ್ನು ಉಮ್ಮರ್ ಸ್ಮರಿಸುತ್ತಾರೆ.

By dtv

Leave a Reply

Your email address will not be published. Required fields are marked *

error: Content is protected !!