ಉಪ್ಪಿನಂಗಡಿ: ಪಾನ್ ಬೀಡ ತಿಂದು ಹಣ ಕೊಡದೇ ತೆರಳುತ್ತಿದ್ದಾಗ ಹಣ ಕೇಳಿದ್ದಕ್ಕೆ ಪಾನ್ ಬೀಡಾ ಅಂಗಡಿಯಾತನಿಗೆ ಕರ್ತವ್ಯದಲ್ಲಿದ್ದ ಪೊಲೀಸರಿಬ್ಬರು ಹಲ್ಲೆ ನಡೆಸಿದ ಆರೋಪ ದ.ಕ ಜಿಲ್ಲೆಯ ಪುತ್ತೂರಿನ ಕಡಬದಲ್ಲಿ ಕೇಳಿಬಂದಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಎಸೈ ಸೀತಾರಾಮ, ಕಾನ್ ಸ್ಟೇಬಲ್ ಮೋಹನ್ ಕಡಬದ ದೇವಸ್ಥಾನವೊಂದರಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಬಂದೋಬಸ್ತ್ಗಾಗಿ ಬಂದಿದ್ದರು.
ಬಂದೋಬಸ್ತ್ನ ಜೊತೆಗೆ ಮದ್ಯಸೇವನೆಯನ್ನೂ ಮಾಡಿಕೊಂಡಿದ್ದರು ಎಂದು ಆರೋಪಿಸಿರುವ ಸ್ಥಳೀಯರು, ಕಡಬದ ಪಾನ್ ಬೀಡಾ ಅಂಗಡಿಯಲ್ಲಿ ಪಾನ್ ತಿಂದು ಹಣ ಕೊಡದೇ ಹೊರ ನಡೆದಿದ್ದರು.
ಆ ಸಂದರ್ಭದಲ್ಲಿ ಅಂಗಡಿ ಮಾಲಕ ಇಪ್ಪತ್ತು ರೂಪಾಯಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದ.
ತಮ್ಮಲ್ಲಿ ಹಣ ಕೇಳಿದ್ದಕ್ಕೆ ಕೆರಳಿದ ಪೊಲೀಸರು ಅಂಗಡಿಯಾತನಿಗೆ ಸಾರ್ವಜನಿಕವಾಗಿ ಥಳಿಸಿದ್ದರು. ಈ ವಿಚಾರ ಸ್ಥಳೀಯರಿಗೆ ತಿಳಿಯುತ್ತಿದ್ದಂತೆ ಅಂಗಡಿಯ ಸುತ್ತ ಜನ ಸೇರಿಕೊಂಡರು.
ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು ಪಾನ್ ಬೀಡಾದ ಹಣ ನೀಡುವಂತೆ ಒತ್ತಾಯಿಸಿದ್ದರು.
ಜನರ ಮೇಲೂ ತಮ್ಮ ದರ್ಪ ಪ್ರದರ್ಶಿಸಿದ ಪೊಲೀಸರನ್ನು ಸಾರ್ವಜನಿಕರು ತಡೆದು ನಿಲ್ಲಿಸಿದ್ದು, ಬಳಿಕ ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.