ಮಂಗಳೂರು: ಮಸೀದಿಯಲ್ಲಿ ಮಹಿಳೆಯರ ನಮಾಜು ಕೊಠಡಿಗೆ ನುಗ್ಗಿ ಅಲ್ಲಿದ್ದ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ಮತ್ತು ಅಶ್ಲೀಲವಾಗಿ ವರ್ತಿಸಿದ ಅನ್ಯ ಧರ್ಮೀಯ ಯುವಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ಮೂಲದ ಸುಜಿತ್ ಶೆಟ್ಟಿ (26) ಎಂದು ಗುರುತಿಸಲಾಗಿದೆ.
ಏ.28 ರಂದು ಮುಸ್ಲಿಂಮರ ಉಪವಾಸ ವೃತದ 27ನೇ ದಿನದ ಲೈಲತುಲ್ ಖದರ್ ದಿನ ತೊಕ್ಕುಟ್ಟುವಿನ ಹುದಾ ಜುಮ್ಮಾ ಮಸೀದಿಯಲ್ಲಿ ಮಹಿಳೆಯರು ಜಾಗರಣೆ ಇದ್ದರು.
ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಮಸೀದಿಯಲ್ಲಿ ಮಹಿಳೆಯರು ನಮಾಜು ಮಾಡುವ ಕೊಠಡಿಗೆ ಏಕಾಏಕಿ ನುಗ್ಗಿದ ಸುಜೀತ್ ಅಲ್ಲಿದ್ದ ಹೆಣ್ಣು ಮಕ್ಕಳ ಕೈ ಹಿಡಿದು ಎಳೆದಿದ್ದಾನೆ. ಬಳಿಕ ಪ್ಯಾಂಟು ಜಾರಿಸಿ ಅಸಭ್ಯವಾಗಿ ವರ್ತಿಸಿ ಮಹಿಳೆಯರ ಮಾನಹಾನಿ ಮಾಡಿ ಪ್ರಾರ್ಥನೆಗೆ ಅಡ್ಡಿ ಪಡಿಸಿದ್ದಾನೆ.
ಈ ಬಗ್ಗೆ ಅಲ್ಲಿದ್ದ ಮಹಿಳೆಯರು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪ್ರಕರಣ ದಾಖಲಿಸಿದ್ದ ಉಳ್ಳಾಲ ಪೊಲೀಸರು ಆರೋಪಿ ಸುಜೀತ್ ಶೆಟ್ಟಿಯನ್ನು ಬಂಧಿಸಿದ್ದಾರೆ..