ದುಬೈ, ಅ.24: ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ರಾತ್ರಿ 7.30ಕ್ಕೆ ಇಂಡೋ ಪಾಕ್ ಮ್ಯಾಚ್ ನಡೆಯಲಿದ್ದು, ಇಡಿ ವಿಶ್ವವೇ ಕಾತುರದಲ್ಲಿದೆ. ಇನ್ನು ಕ್ರಿಕೆಟ್ ಅಭಿಮಾನಿಗಳಂತೂ ಮ್ಯಾಚ್ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ದೇವಸ್ಥಾನದಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಪೂಜೆಗಳು ನಡೆಯುತ್ತಿವೆ. ಮೈಸೂರು ಅಗ್ರಹಾರದ ನೂರೊಂದು ಗಣಪತಿ ದೇಗುಲದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿ, ಭಾರತದ ಬಾವುಟ ಹಿಡಿದು ಗೆದ್ದು ಬಾ ಭಾರತ ಅಂತ ಘೋಷಣೆ ಕೂಗಿದ್ದಾರೆ.
ಎರಡು ವರ್ಷಗಳ ನಂತರ ಇಂಡಿಯಾ ಮತ್ತು ಪಾಕ್ ನಡುವೆ ಕ್ರಿಕೆಟ್ ಕದನ ನಡೆಯುತ್ತಿದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳು ಮ್ಯಾಚ್ ಗುಂಗಿನಲ್ಲಿದ್ದಾರೆ. ಎಲ್ಲಿ ನೋಡಿದರೂ ಇಂಡಿಯಾ ಗೆಲುವಿನ ಕೂಗು ಕೇಳಿ ಬರುತ್ತಿವೆ. ಇಂಡಿಯಾ ಗೆಲುವಿಗಾಗಿ ಕೊಪ್ಪಳದ ದೇವಸ್ಥಾನಗಳಲ್ಲಿ ಪೂಜೆ ನಡೆಯುತ್ತಿವೆ. ಗೆದ್ದು ಬಾ ಇಂಡಿಯಾ, ಚಕ್ ದೆ ಇಂಡಿಯಾ, ಆಲ್ ದಿ ಬೆಸ್ಟ್ ಇಂಡಿಯಾ ಅಂತಾ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ಕೊಪ್ಪಳದ ಈಶ್ವರ ದೇವಸ್ಥಾನದಲ್ಲಿ ಮಹಿಳಾ, ಮಕ್ಕಳು, ಕ್ರಿಕೆಟ್ ಪ್ರೇಮಿಗಳಿಂದ ಪೂಜೆ ನೆರವೇರುತ್ತಿದೆ.
ಟಿ20 ಕದನ ಹಿನ್ನೆಲೆ ಇಂಡಿಯಾ ಗೆಲುವಿಗಾಗಿ ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ಮಂಡ್ಯದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಾರತದ ಹೆಸರಲ್ಲಿ ಅರ್ಚನೆ ಮಾಡಿಸಿ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ ಮಾತನಾಡಿ ಇಂದು ಇಂಡಿಯಾ ಪಾಕಿಸ್ತಾನ್ ಹೈ ಓಲ್ಟೆಜ್ ಮ್ಯಾಚ್. ಇಂಡಿಯಾ ತಂಡ ಗೆದ್ದೆ ಗೆಲ್ಲುತ್ತದೆ. ಇಂತಹ ಮ್ಯಾಚ್ಗಳಲ್ಲಿ ಇಂಡಿಯಾ ಗೆಲ್ಲುತ್ತಾ ಬಂದಿದೆ. ಇಂದಿನ ಮ್ಯಾಚ್ ಕೂಡಾ ಗೆದ್ದೆ ಗೆಲ್ಲುತ್ತದೆ ಎಂದು ಶುಭ ಹಾರೈಸಿದ್ದಾರೆ.